ಕನ್ನಡದ ಮಣ್ಣಿನ ಸಾರ ಸತ್ವವನ್ನು ಸಮರ್ಥವಾಗಿ ಚಲನಚಿತ್ರ ಮಾಧ್ಯಮದಲ್ಲಿ ಹಿಡಿದಿಟ್ಟು ಕನ್ನಡ ಚಿತ್ರರಂಗಕ್ಕೇ ರಾಷ್ಟ್ರೀಯ ಮಟ್ಟದಲ್ಲಿ ಒಂದು ಘನಗಾಂಭೀರ್ಯವನ್ನು ತಂದುಕೊಟ್ಟ ಹಿರಿಮೆ ಕನ್ನಡದ ಖ್ಯಾತ ರಂಗಕರ್ಮಿ, ಕಲಾವಿದ ಮತ್ತು ನಿರ್ದೇಶಕ ಶ್ರೀ ಟಿ ಎಸ್ ನಾಗಾಭರಣ ಅವರದು. ತಮ್ಮ ಕೃತಿಗಳಿಂದಾಗಿ ಅವರು ಒಂಭತ್ತು ಬಾರಿ ರಾಷ್ಟಪ್ರಶಸ್ತಿ ಮತ್ತು 14 ಬಾರಿ ರಾಜ್ಯಪ್ರಶಸ್ತಿಗೆ ಭಾಜನರಾಗಿದ್ದಾರೆಂದರೆ ಅವರ ಸಾಧನೆಗೆ ಯಾರೇ ಆದರೂ ಮುಕ್ತಕಂಠದಿಂದ ಶ್ಲಾಘಿಸಲೇಬೇಕು.
ಕನ್ನಡ ಕಿರುತೆರೆಗೆ ಕೂಡಾ ಅವರ ಕೊಡುಗೆ ಅತ್ಯಂತ ಗಮನಾರ್ಹ. ಮುಖ್ಯವಾಗಿ ಹೇಳಬೇಕೆಂದರೆ ಕನ್ನಡ ಕಿರುತೆರೆ ಆಗಿನ್ನೂ ಕಣ್ಣು ತೆರೆಯುತ್ತಿರುವ ಹೊತ್ತಿನಲ್ಲಿ ಅದರ ಪಾಲನೆ ಪೋಷಣೆಗೆ ಮುಂದಾದ ಮೊದಲಿಗರಲ್ಲಿ ಶ್ರೀ ಟಿ ಎಸ್ ನಾಗಾಭರಣ ಕೂಡಾ ಒಬ್ಬರು. ಕನ್ನಡದ ಮೊದಲ ಧಾರಾವಾಹಿ ಸಿಹಿಕಹಿ ಸೋಮವಾರ ಪ್ರಸಾರವಾಗುತ್ತಿದ್ದರೆ ಬುಧವಾರ ಶ್ರೀಮಾನ್ ಶ್ರೀ ಸಾಮಾನ್ಯ ಎಂಬ ನಾಗಾಭರಣ ಅವರ ಧಾರಾವಾಹಿ ಪ್ರಸಾರ ಆರಂಭಿಸಿತು. ಹೀಗೆ ಕನ್ನಡ ಕಿರುತೆರೆಯ ಆರಂಭದಿಂದಲೇ ಅವರು ನೀಡಿದ ಕೃತಿಗಳು ಒಂದೆರೆಡಲ್ಲಾ. 13 ಸಂಚಿಕೆಗಳ ಲೇಖಕಿಯರ ಕಥೆಗಳು, 12 ಜನ ಕವಿಗಳ 60 ಕವನಗಳ ಗೀತ ಮಾಧುರಿ ಎಂಬ ಕವನಕ್ಕೆ ದೃಶ್ಯರೂಪ… ಹಲವಾರು ಕಥೆ ಸಂಚಿಕೆಗಳಲ್ಲಿ ಅಭಿನಯ…
ಇದನ್ನೆಲ್ಲಾ ಒತ್ತಟ್ಟಿಗಿರಿಸಿದರೆ ಅಲ್ಲಿಂದ ಅವರು ರಾಷ್ಟ್ರೀಯ ವಾಹಿನಿಗೆ ಜಿಗಿದದ್ದು ಇನ್ನೊಂದು ವಿಸ್ಮಯ. ರಾಷ್ಟ್ರೀಯ ವಾಹಿನಿಗಾಗಿ ನಿರ್ದೇಶಿಸಿದ ತೆನಾಲಿರಾಮ ಧಾರಾವಾಹಿ ಅವರಿಗೆ ಅಪಾರ ಹೆಸರು ತಂದುಕೊಟ್ಟಿತು. ಮೊತ್ತಮೊದಲ ಬಾರಿಗೆ ಇಂಡೋ ಮಾರಿಷಸ್ ಅಂತಾರಾಷ್ಟ್ರೀಯ ಸಂಸ್ಥೆಯ ಸಹಯೋಗದಲ್ಲಿ ನಿರ್ಮಿಸಿದ ಸ್ಟೋನ್ ಬಾಯ್ ಧಾರಾವಾಹಿ ಇಂದಿಗೂ ಇತಿಹಾಸದ ಒಂದು ಗಮನಾರ್ಹ ಅಧ್ಯಾಯ. ಆರಂಭದ ಮಾಲ್ಗುಡಿ ಡೇಸ್ ಸ್ಕ್ರಿಪ್ಟ್ ಓಕೆ ಆಗಿದ್ದು ಇವರಿಗಾಗಿ.. ಆದರೆ ಸಿನಿಮಾದಲ್ಲಿ ಅವರು ಬಹುವಾಗಿ ತೊಡಗಿಕೊಂಡಿದ್ದರಿಂದ ನಿನಗೆ ಕಾಯಕ್ಕಾಗಲ್ಲಪ್ಪಾ’ ಅಂತ ಹೇಳಿ ನಿರ್ಮಾಪಕ ಟಿ ಎನ್ ನರಸಿಂಹನ್ ಅವರು ಅದನ್ನು ಶಂಕರ್ನಾಗ್ ಅವರಿಗೆ ವಹಿಸಿದರು….
ಮತ್ತೊಂದು ಮಹತ್ವದ ಹೆಜ್ಜೆಯಲ್ಲಿ ಅವರು ಆಗಿನ ಪ್ರಧಾನಮಂತ್ರಿ ಪಿ ವಿ ನರಸಿಂಹರಾವ್ ಅವರ ಕೈಯಲ್ಲಿ ಸಂಭಾಷಣೆ ಬರೆಸಿದ ‘ಸಹಸ್ರಫಣ’ ಧಾರಾವಾಹಿ…
“ಆ ಸಮಯದಲ್ಲಿ ಪಿ ವಿ ನರಸಿಂಹರಾವ್ ಅವರು ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದರು. ತೆಲುಗಿನಲ್ಲಿ ವಿಶ್ವನಾಥ ಸತ್ಯನಾರಾಯಣ ಎಂಬ ಜ್ಞಾನಪೀಠ ಪರಸ್ಕೃತ ಸಾಹಿತಿಗಳು ಬರೆದಿದ್ದ ‘ವೇಯಿ ಪಡಗಾಲು’ ಎಂಬ ಕೃತಿಯನ್ನು ನರಸಿಂಹರಾವ್ ಅವರು ಹಿಂದಿಗೆ ಭಾಷಾಂತರಿಸಿದ್ದರು. ಅವರೇ ಭಾಷಾಂತರಿಸಿದ್ದ ಅ ಕಾದಂಬರಿ ದೂರದರ್ಶನದಲ್ಲಿ ಧಾರಾವಾಹಿಯಾಗಿ ಪ್ರಸಾರವಾಗುವಾಗ ಅವರೇ ಖುದ್ದಾಗಿ ಜೊತೆಗೆ ಕುಳಿತು ಅದರ ಚಿತ್ರಕಥೆ ಮತ್ತು ಸಂಭಾಷಣೆಗೆ ಸಹಕರಿಸುತ್ತಾ ಇದ್ದರು. ಬೆಳಿಗ್ಗೆ ಬೆಳಿಗ್ಗೆಯೇ ದೆಹಲಿಯಲ್ಲಿದ್ದ ಅವರ ಮನೆಗೆ ಹೋಗಿ ಚಿತ್ರಕಥೆ ಸಂಭಾಷಣೆಗೆ ಅವರ ಜೊತೆ ಕುಳಿತುಕೊಳ್ಳುತ್ತಿದ್ದೆ. ಆನಂತರ ಅದು ಪ್ರಸಾರ ಆರಂಭಿಸಿದ ಕೆಲವೇ ದಿನಗಳಲ್ಲಿ ಅವರು ಪ್ರಧಾನಮಂತ್ರಿಯೂ ಆಗಿಬಿಟ್ಟರು. ಸುಮಾರು 190 ಸಂಚಿಕೆಗಳಲ್ಲಿ ಆ ಧಾರಾವಾಹಿ ರಾಷ್ಟ್ರೀಯ ವಾಹಿನಿಯಲ್ಲಿ ಪ್ರಸಾರ ಆದದ್ದು ಈಗಲೂ ನನಗೆ ರೋಮಾಂಚನ” ಎನ್ನುತ್ತಾರೆ ಶ್ರೀ ನಾಗಾಭರಣ.
ತಮ್ಮ ಸಾಹಿತ್ಯಪ್ರೇಮ ಮತ್ತು ಸೃಜನಶೀಲತೆಯಿಂದ ಅವರು ನಡೆಸಿದ ಪ್ರಯೋಗಗಳು ಒಂದೆರಡಲ್ಲಾ. ಅಮೆರಿಕಾದಲ್ಲಿ ಗೋರೂರು ಎಂಬ ಕೃತಿಯನ್ನು ಆಧರಿಸಿ ‘ಆನ್ ಇಂಡಿಯನ್ ಇನ್ ಅಮೆರಿಕಾ’ ಎಂಬ ಆ ಧಾರಾವಾಹಿಯನ್ನು ಅಮೆರಿಕಾದ ಹದಿನೆಂಟು ರಾಜ್ಯಗಳಲ್ಲಿ ಆ ಕಾಲದಲ್ಲಿಯೇ ಚಿತ್ರಿಸಿದ ಕೀರ್ತಿ ಅವರದು. ಆ ಧಾರಾವಾಹಿಯಲ್ಲಿ ಗೋರೂರರ ಪಾತ್ರದಲ್ಲಿ ಸಿ ಆರ್ ಸಿಂಹ ಮತ್ತು ಗೋರೂರರ ಪತ್ನಿಯ ಪಾತ್ರದಲ್ಲಿ ಅರುಂಧತಿ ನಾಗ್ ಅವರು ಅಭಿನಯಿಸಿದ್ದರು. ಪ್ರಪ್ರಥಮ ಬಾರಿಗೆ ಅಮೆರಿಕಾದಲ್ಲಿಯೇ ಸಂಪೂರ್ಣವಾಗಿ ಚಿತ್ರಿತವಾದ ಆ ಧಾರಾವಾಹಿಯಲ್ಲಿ ಸಂಜಯ್ದತ್ ಪತ್ನಿ ರಿಚಾ ಶರ್ಮ ಸೇರಿದಂತೆ ಅನೇಕ ಕನ್ನಡದ ನಟನಟಿಯರು ನಟಿಸಿದ್ದರು.
ಕಾಲಾನಂತರದಲ್ಲಿ ದೂರದರ್ಶನದಲ್ಲಿ ಅವ್ಯವಹಾರಗಳು ಹೆಚ್ಚಾದಾಗ ಅಂದಿನ ವ್ಯವಸ್ಥೆಯ ವಿರುದ್ಧ ಸಿಡಿದು ನಿಂತು ದೂರದರ್ಶನ ಸಂಸ್ಥೆಯ ಎದುರಿಗೆ ಪ್ರತಿಭಟನೆ ಧರಣಿ ಹೋರಾಟಗಳನ್ನು ನಡೆಸಿದರು. ಈ ಹೋರಾಟದ ಪ್ರತಿಫಲವಾಗಿ ದೂರದರ್ಶನದ ಸ್ವಾರ್ಥಪೀಡಿತ ವ್ಯವಸ್ಥೆ ಇವರಿಗೆ ಬಾಗಿಲು ಮುಚ್ಚಿತು. ಆದರೆ ‘ಉದಯ’ ಟೀವಿ ಎಂಬ ಹೊಸಾ ವಾಹಿನಿ ಕನ್ನಡದಲ್ಲಿ ಆರಂಭವಾಗಿ ಹೊಸ ಅವಕಾಶಗಳ ಬಾಗಿಲು ತೆರೆಯಿತು. ಸರಿಸುಮಾರು ಹತ್ತು ವರ್ಷಗಳ ಕಾಲ ಉದಯ ಟೀವಿಯ ಬೆಳವಣಿಗೆಯಲ್ಲಿ ನಾಗಾಭರಣ ಅವರು ಕೊಟ್ಟ ಕಾಣಿಕೆ ಅಪಾರವಾದದ್ದು. ಕನ್ನಡದ ಅನೇಕ ಲೇಖಕ ಲೇಖಕಿಯರ ಕಥೆ ಕಾದಂಬರಿಗಳನ್ನು ಧಾರಾವಾಹಿಯಾಗಿಸಲಿಕ್ಕೆ ಮುಂದಾದರು. ಅನಾಥೆ, ಬನಶಂಕರಿ, ಗೆಳತಿ… ಎಲ್ಲಕ್ಕಿಂತ ಮುಖ್ಯವಾಗಿ ಮಧ್ಯಾಹ್ನದ ಸಮಯದಲ್ಲಿ ಮೂಡಿಬರುತ್ತಿದ್ದ ‘ಸಂಕ್ರಾಂತಿ’ ಧಾರಾವಾಹಿ ಅವರಿಗೆ ಇನ್ನಿಲ್ಲದಷ್ಟು ಪ್ರಖ್ಯಾತಿಯನ್ನು ತಂದುಕೊಟ್ಟಿತು. ಹಳ್ಳಿಬದುಕಿನ ಸಹಜ ವಾತಾವರಣದಲ್ಲಿ ವಿಭಿನ್ನ ಬಗೆಯ ಪಾತ್ರಗಳಿಂದ ಅನಾವರಣಗೊಳ್ಳುತ್ತಿದ್ದ ಆ ವಿಶಿಷ್ಟ ಕಥೆ ಒಂದು ಗಂಭೀರ ಯಶಸ್ವಿ ಪ್ರಯತ್ನವಾಗಿತ್ತು. ಕನ್ನಡದ ಅತ್ಯಂತ ಜನಪ್ರಿಯ ಮತ್ತು ಸಾರ್ವಕಾಲಿಕ ಶ್ರೇಷ್ಠ ಧಾರಾವಾಹಿಗಳನ್ನು ಪರಿಗಣಿಸುವಾಗ ಸಂಕ್ರಾಂತಿ ಕೂಡಾ ಆ ಸಾಲಿನಲ್ಲಿ ನಿಲ್ಲುತ್ತದೆ.
ಆ ನಂತರದ ದಿನಗಳಲ್ಲಿ ತಾಂತ್ರಿಕವಾಗಿ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದ್ದ ಮಹಾಮಾಯಿ ಧಾರಾವಾಹಿ ಕೂಡಾ ನಿರ್ಮಿಸಿದರು. ಈಗಾದರೂ ಅತ್ಯಂತ ಸುಲಭವಾಗಿ ಸಿಗುವ ಗ್ರಾಫಿಕ್ಸ್ ಇತ್ಯಾದಿಗಳ ಯಾವುದೇ ಸಹಕಾರಗಳಿಲ್ಲದೆ ಇರುವ ತಂತ್ರಜ್ಞಾನದಲ್ಲಿಯೇ ಮಹಾಮಾಯಿಯನ್ನು ತಯಾರಿಸಲು ಅವರು ತೆಗೆದುಕೊಂಡ ಶ್ರಮ ಅಭಿನಂದನೀಯ.
ಅದಾದ ನಂತರ ಸುರ್ಣ ವಾಹಿನಿಗಾಗಿ ಅವರು ನಿರ್ಮಿಸಿ ನಿರ್ದೇಶಿಸಿದ ‘ಕೆಳದಿ ಚೆನ್ನಮ್ಮ’ ಪ್ರಪ್ರಥಮ ಬಾರಿಗೆ ಐತಿಹಾಸಿಕ ಧಾರಾವಾಹಿಯೊಂದರ ಅನಾವರಣದ ಯಶಸ್ವಿ ಕಥೆ. ಈ ಧಾರಾವಾಹಿಗಾಗಿ ಅವರು ವ್ಯಯಿಸಿದ ಶ್ರಮ ಅತ್ಯಂತ ಅಮೂಲ್ಯವಾದದ್ದು. ಆ ಕಾಲಕ್ಕೇ ಒಂದು ಕೋಟಿ ಖರ್ಚು ಮಾಡಿ ಸೆಟ್ ಹಾಕಿಸಿ ಅದರಲ್ಲೇ ಧಾರಾವಾಹಿಯ ಚಿತ್ರೀಕರಣ ಮಾಡಲಾಗುತ್ತಿತ್ತು. ಹತ್ತು ಕುದುರೆಗಳನ್ನು ಎರಡು ತಿಂಗಳ ಕಾಲ ನಿರಂತರವಾಗಿ ಅಲ್ಲಿಯೇ ಸೆಟ್ನಲ್ಲಿಯೇ ಉಳಿಸಿಕೊಳ್ಳಲಾಗಿತ್ತು. ತುಂಬ ಮಹತ್ವಾಕಾಂಕ್ಷೆಯಿಂದ ಆರಂಭಿಸಿದ್ದ ಆ ಧಾರಾವಾಹಿಗೆ ಆನಂತರ ವಾಹಿನಿಯ ಕಡೆಯಿಂದ ಸಹಕಾರ ಸಿಗದೆ ಅನಿವಾರ್ಯವಾಗಿ ಅವರು ತಮ್ಮ ಪ್ರಯತ್ನವನ್ನು ಮೊಟಕುಗೊಳಿಸಬೇಕಾಯಿತು. ಆ ಸಮಯದಲ್ಲಿ ಆದ ಸುಮಾರು 50 ಲಕ್ಷ ರೂಪಾಯಿಗಳಷ್ಟು ನಷ್ಟವನ್ನು ಭರಿಸಿಕೊಳ್ಳಲು ಮುಂದಿನ ದಿನಗಳಲ್ಲಿ ಅವರು ಹಗಲೂ ರಾತ್ರಿ ಸಿನಿಮಾ ಮತ್ತು ಧಾರಾವಾಹಿ ಚಿತ್ರೀಕರಣಗಳಲ್ಲಿ ಭಾಗವಹಿಸಬೇಕಾಗಿತ್ತು.
ಕೆಳದಿ ಚೆನ್ನಮ್ಮ ನಂತರ ಶ್ರೀ ನಾಗಾಭರಣ ಅವರು ಧಾರಾವಾಹಿ ನಿರ್ಮಾಣದಿಂದ ಹಿಂದೆ ಸರಿದಿದ್ದಾರಾದರೂ ಧಾರಾವಾಹಿಗಳಲ್ಲಿ ನಟಿಸುವುದನ್ನು ನಿಲ್ಲಿಸಿಲ್ಲ. ಸಿನಿಮಾಗಳು ನಾಟಕಗಳು ಮತ್ತು ಅಕಾಡೆಮಿ ಕಾರ್ಯಗಳಲ್ಲಿ ಬಿಡುವಿಲ್ಲದಂತೆ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀ ಟಿ ಎಸ್ ನಾಗಾಭರಣ ಅವರು ಇಂದಿನ ಕಿರುತೆರೆಗೂ ಪ್ರಸ್ತುತವಾಗುವಂತೆ ಮತ್ತಷ್ಟು ತಮ್ಮನ್ನು ತಾವು ಕಿರುತೆರೆಯಲ್ಲಿ ತೊಡಗಿಸಿಕೊಳ್ಳಲಿ ಎಂದು ಪತ್ರಿಕೆಯು ಆಶಿಸುತ್ತದೆ.
