ಕಿರುತೆರೆಯ ಕಲಾವಿದರು ತಂತ್ರಜ್ಞರು ಸೇರಿ (KTVA ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್) ಆರಂಭಿಸಿದ್ದು ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲರ ಹೆಗ್ಗಳಿಕೆಯಾಗಿತ್ತು.ಅದೊಂದು ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದು, ಆಗಲೇ ಹತ್ತಾರು ವರ್ಷಗಳಿಂದ ಅಸ್ತಿತ್ವದಲ್ಲಿ ಇದ್ದ ಬೇರೆ ಸಂಸ್ಥೆಗಳು ಮಾಡದೆ ಹೋದ ಕೆಲಸಗಳನ್ನೆಲ್ಲ ಚಿಟಿಕೆ ಹೊಡೆಯುವಂತೆ KTVA ಮಾಡುತ್ತ ಬಂತು. ಆ ಓಘಕ್ಕೆ ಅದ್ಯಾಕೋ ಗ್ರಹಣ ಹಿಡಿದಂತೆ ಕಾರ್ಯಕ್ರಮಗಳು ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತ್ತು. ಅಲ್ಲಿ ಇಲ್ಲಿ ಅರ್ಥಪೂರ್ಣವಾದ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಕಿರುತೆರೆಯ ಕಲಾವಿದರಾಗಲಿ, ತಂತ್ರಜ್ಞರಾಗಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳಲಾಗದಂತ ಸ್ಥಿತಿ ನಿರ್ಮಾಣವಾಗಿತ್ತು. ಅದಕ್ಕೆ ಇಂಥದ್ದೇ ಕಾರಣ ಎಂದಲ್ಲ. ಕಾಲ ಸರಿದಂತೆ ಎಲ್ಲ ಸಂಸ್ಥೆಗಳಲ್ಲೂ ಕವಿಯುವ ಮೋಡ ಅದಕ್ಕೂ ಕವಿದಿತ್ತೊ ಏನೋ?

ಅದನ್ನು ಸರಿಸಲು ಎಂಬಂತೆ ಒಂದು ಕಾರಣೀಭೂತವಾದ ಕಾರ್ಯಕ್ರಮ ನಡೆಯಬೇಕಿತ್ತು. KTVA ಚುನಾವಣೆ ಮುಂದಿತ್ತು. ಹಾಗಾಗಿ ಅದನ್ನು ನೆಪವಾಗಿಟ್ಟುಕೊಂಡು ಚಿತ್ರರಂಗದ ಮೇರು ಕಲಾವಿದರು, ಮೊದಲ ವಾಕ್ಚಿತ್ರದ ನಾಯಕರು, ನಿರ್ಮಾಪಕರು ಆದ ಶ್ರೀ ಸುಬ್ಬಯ್ಯನಾಯ್ಡು ಅವರ ಜನ್ಮ ದಿನವನ್ನ ಸಮಾನಮನಸ್ಕರಾದ ಸ್ನೇಹಿತರೆಲ್ಲ ಸೇರಿ ಯುವಪಥ, ಜಯನಗರದಲ್ಲಿ ಮೂರನೇ ಮಾರ್ಚ್ 2023ರಂದು ಆಚರಿಸಿದೆವು. ಅಂದಿನ ವಿಶೇಷತೆ ಎಂದರೆ ಯಾವ ಪೂರ್ವಾಗ್ರಹವೂ ಇಲ್ಲದೆ ಸಮಾನಮನಸ್ಕರು ಸಾಂದರ್ಭಿಕವಾಗಿ ಸೇರಿ ಸುಬ್ಬಯ್ಯನಾಯ್ಡು ಅವರ ಜನ್ಮ ದಿನೋತ್ಸವದ ನೆಪದಲ್ಲಿ ಚಿತ್ರರಂಗದ ದಿಗ್ಗಜರನ್ನು ನೆನಸಿಕೊಂಡು ಅವರ ಕುಟುಂಬದೊಂದಿಗೆ ಕಾಲ ಕಳೆದಿದ್ದು.
ಸುಬ್ಬಯ್ಯನಾಯ್ಡುರವರ ಕುಟುಂಬ ನಾಲ್ಕನೆಯ ತಲೆಮಾರಿನಲ್ಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು ಕಾಲಮಾನದನುಗುಣವಾಗಿ ಟಿ.ವಿ ಮಾಧ್ಯಮಕ್ಕೂ ವ್ಯಾಪಿಸಿ ತೊಡಗಿರುವುದು ಒಂದು ಹೆಮ್ಮೆಯ ವಿಷಯ.
ಸುಬ್ಬಯ್ಯನಾಯ್ಡುರವರ ಸುಪುತ್ರರಾದ ಲೋಕೇಶ್ ರಿಗೂ ಭಾವ ನಮನ ಮಾಡುತ್ತಾ ಸುಬ್ಬಯ್ಯ ನಾಯ್ಡು ಸೊಸೆ ಗಿರಿಜಾ ಲೋಕೇಶ್, ಮೊಮ್ಮಗ ಸೃಜನ್ ಲೋಕೇಶ್, ಮೊಮ್ಮಗಳಾದ ಪೂಜಾ ಲೋಕೇಶ್ ಹಾಗು ಮೊಮ್ಮಗನ ಪತ್ನಿ ಗ್ರೀಷ್ಮಾ ಸೃಜನ್ ಅಲ್ಲದೆ ಸೃಜನ್ ಹಾಗು ಗ್ರೀಷ್ಮಾರ ಸುಪುತ್ರ ಸುಕೃತ್ ಕೂಡ ವೇದಿಕೆಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ತಮ್ಮ ಪ್ರತಿಭಾ ಪ್ರದರ್ಶನದೊಂದಿಗೆ ಅವರ ಹಿರಿಯ ವಂಶಜರಿಗೆ ಭಾವಾರ್ಪಣೆಯನ್ನ ಮಾಡಿದರು.
ಕಲಾವಿದರುಗಳಾದಿಯಾಗಿ ಸೇರಿದ್ದ ಪ್ರೇಕ್ಷಕ ವೃಂದವೇ ಅಲ್ಲದೆ ಸುಬ್ಬಯ್ಯನಾಯ್ಡು ನಾಟಕ ಮಂಡಳಿಯಿಂದಲೂ ಜೊತೆಗಿದ್ದ ಶ್ರೀ ಕೃಷ್ಣ, ಶ್ರೀಮತಿ ರಾಧ ಹಾಗು ಶ್ರೀಮತಿ ರುಕ್ಮಣಿ ಅವರು ಲವಕುಶ ನಾಟಕದ ಹಾಡುಗಳನ್ನು ಮೆಲುಕು ಹಾಕಿ ಪ್ರೇಕ್ಷಕರನ್ನು ರಂಜಿಸಿದ್ದು ಅಲ್ಲದೆ ಗತವೈಭವದ ಕಂಪನಿ ನಾಟಕದ ಗೀತೆಗಳ ಲೋಕಕ್ಕೆ ಕರೆದೊಯ್ದರು.
ಅಲ್ಲಿ ನೆರೆದಿದ್ದ ಪ್ರೇಕ್ಷಕರೆಲ್ಲರೂ ಕನ್ನಡದ ಪ್ರಥಮ ವಾಕ್ಚಿತ್ರ ಸತಿ ಸುಲೋಚನ ತನ್ನ 20 ವರ್ಷ ಪೂರೈಸುತ್ತಿರುವ, ಅದರ ಮೂಲಕ ಕನ್ನಡ ಚಿತ್ರರಂಗದ 20 ವರ್ಷಗಳನ್ನ ಅದ್ಧೂರಿಯಾಗಿ ಬರ ಮಾಡಿಕೊಳ್ಳುವ ಪೂರ್ವ ತಯಾರಿಯನ್ನು ಸೂಚಿಸುವಂತೆ ಇತ್ತು. ಇದು ಚಿತ್ರರಂಗಕ್ಕೂ ನೆನಪಿನ ಕರೆಗಂಟೆಯಂತೆ ಪರಿಣಮಿಸಿದರೆ ಆ ಕಾರ್ಯಕ್ರಮ ಸಾರ್ಥಕ. ಚಿತ್ರರಂಗ ತಾನೇ ಮುಂದಾಗಿ ಆಚರಿಸಬೇಕಾದ ಈ ಸುಸಂದರ್ಭಕ್ಕೆ ಕನ್ನಡ ಕಿರುತೆರೆಯ ಕಲಾವಿದರ ಬಳಗ ನಾಂದಿ ಹಾಡಿದರು.
