“ಸಿನಿಮಾಗಳನ್ನ ಸೀರಿಯಲ್ ತರ ತೆಗಿತಾ ಇದ್ದಾರೆ.
ಸೀರಿಯಲ್ಗಳನ್ನ ಸಿನಿಮಾ ತರ ತೆಗಿತಾ ಇದ್ದಾರೆ.”
ಕನ್ನಡ ಕಿರುತೆರೆ ಉದ್ಯಮ ಯಾವ ಹಂತದಲ್ಲಿ ಏರು ಗತಿಯನ್ನು ಕಾಣುತ್ತಿದೆ ಎಂಬುದಕ್ಕೆ ಇದೊಂದು ಮಾತೇ ಸಾಕ್ಷಿ. ಹಿರಿತೆರೆ ಕಿರುತೆರೆ ಎಂದು ಸಿನಿಮಾ ಮತ್ತು ಟಿವಿ ಎರಡರ ನಡುವೆ ವರ್ಗಿಕರಣದ ನಾಮಕರಣವಾಗಿದೆ. ಕಿರುತೆರೆ ಎಂದು ಹೇಳುವಲ್ಲಿ ಹಿರಿತರೆ ತನ್ನ ದೊಡ್ಡತನವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡಿದೆ ಯ. ಆದರೆ ಭವಿಷ್ಯದ ದೃಷ್ಟಿಯಿಂದ ಗಮನಾರ್ಹ ಉದ್ಯಮ ಎನಿಸಿಕೊಂಡಿರುವ, ಮನೋರಂಜನ ಮಾಧ್ಯಮದಲ್ಲಿ ಅಪಾರ ಬೆಳವಣಿಗೆಯನ್ನು ಗುರುತಿಸಿಕೊಂಡಿರುವ ಕಿರುತೆರೆ ತನ್ನ ವೀಕ್ಷಕರ ವಲಯವನ್ನು ಅಪಾರವಾಗಿ ವಿಸ್ತರಿಸಿಕೊಳ್ಳುತ್ತಾ ಸಾಗಿದೆ. ವ್ಯವಹಾರವೂ ಕೂಡ ಹಿರುತೆರೆಯ ಒಟ್ಟು ವ್ಯವಹಾರಕ್ಕಿಂತ 10 ಪಟ್ಟು ಈಗ ದೊಡ್ಡದಾಗಿ ಬೆಳೆದಿದೆ. ಹಿರಿತೆರೆಯಲ್ಲಿ ಕೆಲಸ ಮಾಡುವ ತಂತ್ರಜ್ಞರು ಕಲಾವಿದರಿಗಿಂತ ಹೆಚ್ಚು ಮಂದಿ ಕಿರುತೆರೆಯಲ್ಲಿ ತಮ್ಮ ಬದುಕು ಕಂಡುಕೊಂಡಿದ್ದಾರೆ.
ಹೀಗೆ ತನ್ನ ಘನತೆಯನ್ನು ಎತ್ತರೆತ್ತರಕ್ಕೆ ಏರಿಸಿಕೊಳ್ಳುತ್ತಲೇ ಇರುವ ಕಿರುತೆರೆಯು, ತನ್ನ ಕಲಾವಿದರು ಮತ್ತು ತಂತ್ರಜ್ಞರು ಎಲ್ಲರನ್ನೂ ಸಂಘಟಿಸಲು ಮುಂದಾಗಿದೆ. ಹೀಗೆ ಸಂಘಟಿತರಾಗುವ ಮೂಲಕ ತಮ್ಮ ತಮ್ಮ ಆಶೋತ್ತರಗಳನ್ನು ಗುರುತಿಸಿಕೊಳ್ಳಲು, ಭವಿಷ್ಯವನ್ನು ಬೆಳೆಸಿಕೊಳ್ಳಲು ಸಂಘ ಸಂಸ್ಥೆಗಳ ಅವಶ್ಯಕತೆ ಬಹು ಮುಖ್ಯವಾಗಿದೆ. ಈ ಅವಶ್ಯಕತೆಯನ್ನು ತುಂಬಾ ಹಿಂದೆಯೇ ಕನ್ನಡ ಕಿರುತೆರೆ ಉದ್ಯಮ ಕಂಡುಕೊಂಡಿತ್ತು. ಹಾಗಾಗಿಯೇ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ರೂಪುಗೊಂಡಿತು.

ಕಿರುತೆರೆಯ ಸಾವಿರಾರು ಜನರ ಆಶೋತ್ತರಗಳಿಗೆ ಉತ್ತರರೂಪವಾಗಿ, ತುಂಬಾ ನಿರೀಕ್ಷೆಯನ್ನೇ ಹುಟ್ಟಿ ಹಾಕಿ ಹುಟ್ಟಿದಂತಹ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಆರಂಭದಲ್ಲಿ ದೊಡ್ಡ ಸುದ್ದಿ ಮಾಡಿದ್ದು ಅಚ್ಚರಿ ಏನಿಲ್ಲ. ಆನಂತರದ ದಿನಗಳಲ್ಲಿ ಬಣಗಾರಿಕೆಯಲ್ಲಿ ಒಣಗಿ ಹೋಗಿದ್ದು ಕೂಡ ಸುಳ್ಳೇನಲ್ಲ. ಹಾಗಾಗಿ ಹೆಸರಿಗೆ ಮಾತ್ರ ಅಸ್ತಿತ್ವದಲ್ಲಿದ್ದ ಸಂಸ್ಥೆಯ ಕಾರ್ಯ ಚಟುವಟಿಕೆಗಳು ಯಾರ ಗಮನಕ್ಕೂ ಬಾರದ ಹಾಗೆ ಬಹುತೇಕ ನಿಂತೇ ಹೋಗಿದ್ದವು ಎಂಬುದು ಎಲ್ಲರೂ ಬಲ್ಲ ಸಂಗತಿ.
ಇದೀಗ ಹೊಸದಾಗಿ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಚುನಾವಣೆ ನಡೆದು ಹೊಸ ತಂಡವು ಸಂಘವನ್ನು ಮುನ್ನಡೆಸಲು ಆಯ್ಕೆಯಾಗಿ ಬಂದಿದೆ. ರವಿ ಗರಣಿ ಅವರ ಅಧ್ಯಕ್ಷತೆ ಮತ್ತು ಸೃಜನ್ ಲೋಕೇಶ್ ಅವರ ಕಾರ್ಯದರ್ಶಿತ್ವದಲ್ಲಿ ಈ ಹೊಸ ತಂಡವು ಹೊಸ ಕನಸುಗಳನ್ನು ವಿಸ್ತರಿಸುವತ್ತ ಹೆಜ್ಜೆ ಇಟ್ಟಿರುವುದು ಅಭಿನಂದನಾರ್ಹ.
ಇಂದಿನ ತಾಂತ್ರಿಕ ಯುಗದಲ್ಲಿ ಯಾವುದೇ ಸಂಸ್ಥೆಯಾಗಲಿ ಅಥವಾ ವ್ಯಕ್ತಿಯಾಗಲಿ ತನ್ನ ಅಸ್ತಿತ್ವವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಗುರುತಿಸಿಕೊಳ್ಳುವುದು ಮತ್ತು ಬೆಳೆಸಿಕೊಳ್ಳುವುದು ಕೇವಲ ಅಗತ್ಯ ಮಾತ್ರ ಅಲ್ಲ ಅನಿವಾರ್ಯ ಎಂಬಂತಹ ಸ್ಥಿತಿಗೆ ತಲುಪಿದೆ. ಸಂಪರ್ಕ ಮಾಧ್ಯಮಗಳೇ ಅತ್ಯಂತ ವಿರಳವಾಗಿದ್ದ ಕಾಲದಲ್ಲಿ ಕೇವಲ ಕನಸುಗಳು ಕನಸುಗಳಾಗಿ ಮಾತ್ರ ಉಳಿಯುತ್ತಿದ್ದವು. ಆದರೆ ಈಗ ಹಾಗಲ್ಲ. ಸಾವಿರ ಜನರ ಸರ್ವ ಕನಸುಗಳಿಗೂ ಒಂದು ರೂಪ ನೀಡಲು ಇಲ್ಲಿ ಸಾಧ್ಯತೆ ಇದೆ. ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶವಿದೆ. ಸಾಮೂಹಿಕ ಒಗ್ಗಟ್ಟಿನಲ್ಲಿ ಸಂಸ್ಥೆಯೊಂದು ತನ್ನ ಎಲ್ಲಾ ಸದಸ್ಯರ ಹಿತಾಸಕ್ತಿಗಳನ್ನು ಕಾಪಾಡುವುದು ಸುಲಭ ಸಾಧ್ಯವಾಗಿದೆ.
ಹೀಗಾಗಿಯೇ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸಂಸ್ಥೆಯು ತನ್ನ ಅಧಿಕೃತ ಜಾಲತಾಣ ಒಂದನ್ನು ಆರಂಭಿಸಲು ಯೋಚಿಸಿದೆ. ಈ ಜಾಲತಾಣದ ಮೂಲಕ ತನ್ನೆಲ್ಲ ಯೋಜನೆಗಳನ್ನು ತನ್ನ ಪ್ರತಿ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಸುಲಭವಾಗಿ ತಲುಪಿಸಲು ಯೋಜಿಸಿದೆ.. ಅಷ್ಟೇ ಅಲ್ಲದೆ ಸಂಘವು ತನ್ನ ಉದ್ದೇಶಗಳನ್ನು ಸರ್ವ ಸದಸ್ಯರೊಂದಿಗೆ ಹಂಚಿಕೊಂಡು ಎಲ್ಲರ ಕುಂದು ಕೊರತೆಗಳಿಗೆ ಕಿವಿಯಾಗಿ ದನಿಯಾಗಿ ಶಕ್ತಿಯಾಗಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಎಲ್ಲ ವಲಯಗಳಲ್ಲೂ ಇರುವ ಹಾಗೆ ಕಿರುತೆರೆ ವಲಯವು ಕೂಡ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಮುಖ್ಯವಾಗಿ ಇದು ಸಂಘಟಿತ ವಲಯ ಆಗಿಲ್ಲದೆ ಇರುವುದರಿಂದ ಸರ್ಕಾರದ ಅಧಿಕೃತ ಮಾನ್ಯತೆಯನ್ನು ಪಡೆಯುವ ಕಾರ್ಮಿಕ ವರ್ಗ ಎಂದಾಗಲಿ, ನೌಕರವರ್ಗ ಎಂದಾಗಲಿ ಪರಿಗಣಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇದನ್ನು ಉದ್ಯಮವಾಗಿ ಸಂಪೂರ್ಣ ಮಾನ್ಯತೆ ನೀಡಲು ಯಾವುದೇ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಿರುವ ಪರಿಸ್ಥಿತಿಯಲ್ಲಿ ಇಲ್ಲಿನ ಬಹುತೇಕ ತಂತ್ರಜ್ಞರು ಕಲಾವಿದರು ಎಲ್ಲರೂ ಕೂಡ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಬೇಕಾಗುತ್ತದೆ. ಶೋಷಣೆಗೆ ಒಳಗಾಗಬೇಕಾಗುತ್ತದೆ.
ಇಲ್ಲಿ ವ್ಯವಸ್ಥೆಯನ್ನು ದೂಷಿಸದೆ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಒಂದು ಸ್ಪಷ್ಟ ರೂಪಕ್ಕೆ ತರುವ ಪ್ರಯತ್ನವನ್ನು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಮಾಡಲಿದೆ. ಆ ದಿಕ್ಕಿನಲ್ಲಿ ತನ್ನ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಇದರ ಜೊತೆಗೆ ಉದ್ಯಮದ ಎಲ್ಲರ ಹಿತಾಸಕ್ತಿ, ಆರೋಗ್ಯ ಕಾರ್ಯಕ್ರಮ, ವೈದ್ಯಕೀಯ ಚಿಕಿತ್ಸೆ, ಸರಕಾರಿ ಸವಲತ್ತುಗಳು, ಬೇರೆ ಬೇರೆ ಸಂಸ್ಥೆಗಳಿಂದ ಆರ್ಥಿಕ ನೆರವು, ನಿಸ್ಸಹಾಯಕ ಕಲಾವಿದರು ತಂತ್ರಜ್ಞರಿಗೆ ಸಹಾಯಧನ, ಉದ್ಯಮದ ಬೆಳವಣಿಗೆಗೆ ಅನುಕೂಲವಾಗುವ ಯೋಜನೆಗಳು, ಕಾರ್ಯಕ್ರಮಗಳು, ಉದ್ಯಮದಲ್ಲಿ ಹೊಸ ಹೊಸ ಅವಕಾಶಗಳು ಸೃಷ್ಟಿಯಾಗಿರುವ ಕುರಿತು ಮಾಹಿತಿಗಳು,…. ಹೀಗೆ ಎಲ್ಲ ವಿಷಯಗಳನ್ನು ಸಮಗ್ರವಾಗಿ ಸರ್ವ ಸದಸ್ಯರೊಂದಿಗೆ ಮತ್ತು ಸಾರ್ವಜನಿಕವಾಗಿ ಹಂಚಿಕೊಳ್ಳುವ ಉದ್ದೇಶದಿಂದ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ತನ್ನ ಅಧಿಕೃತ ಜಾಲತಾಣ ಒಂದನ್ನು ಪ್ರಾರಂಭಿಸಲಿದೆ. ಜುಲೈ 9 ನೇ ತಾರೀಕು ಈ ಜಾಲತಾಣವನ್ನು ಲೋಕಾರ್ಪಣೆಗೊಳಿಸಲು ಸಂಸ್ಥೆಯ ಆಡಳಿತ ಮಂಡಳಿ ನಿರ್ಧಾರ ಮಾಡಿರುತ್ತದೆ.

ತುಂಬಾ ನಿರೀಕ್ಷೆಗಳನ್ನು ಹುಟ್ಟಿ ಹಾಕಿರುವ ಈ ಜಾಲತಾಣದ ಸಮಗ್ರ ರೂಪುರೇಷೆ ಮತ್ತು ತಾಂತ್ರಿಕ ಯೋಜನೆಗಳಿಗೆ ಮುಖ್ಯಸ್ಥರನ್ನಾಗಿ ಶ್ರೀ ಎಂ ಎಲ್ ಪ್ರಸನ್ನ ಅವರನ್ನು ನಿಯೋಜನೆಗೊಳಿಸಲಾಗಿದೆ. ಪ್ರಸನ್ನ ಅವರು ಕನ್ನಡದ ಹಿರಿತೆರೆ ಮತ್ತು ಕಿರುತೆರೆಯಲ್ಲಿ ಸಾಹಿತಿಗಳಾಗಿ ನಿರ್ದೇಶಕರಾಗಿ, ಚಿತ್ರಕಥೆ ಸಂಭಾಷಣೆಕಾರರಾಗಿ ಕಳೆದ ಎರಡು ದಶಕಗಳಿಂದ ನಿರಂತರವಾಗಿ ಕಲಾಸೇವೆ ಮಾಡಿಕೊಂಡು ಬಂದಿದ್ದಾರೆ. ಸಾಮಾಜಿಕ ಜಾಲತಾಣಗಳ ಬಳಕೆ ಹಾಗೂ ತಂತ್ರಜ್ಞಾನದ ಕುರಿತು ಸಾಕಷ್ಟು ಅನುಭವ ಇರುವ ಅವರು ಪತ್ರಿಕಾ ಸಂಪಾದಕರಾಗಿ ಕೂಡ ಕೆಲಸ ಮಾಡಿದ್ದಾರೆ. ಹಾಗಾಗಿ ಅವರನ್ನು ಈ ಮಹತ್ತರ ಕಾರ್ಯಕ್ಕೆ ಆಡಳಿತ ಮಂಡಳಿಯೂ ನಿಯೋಜಿಸಿರುವುದು ಅರ್ಥಪೂರ್ಣವಾಗಿದೆ.

ಇದಲ್ಲದೆ ಜಾಲತಾಣದ ನಿರ್ಮಾಣ ಮತ್ತು ನಿರ್ವಹಣೆಯ ಉಸ್ತುವಾರಿಯನ್ನು ಜಾಲತಾಣ ತಾಂತ್ರಿಕ ವಿನ್ಯಾಸಕಾರರಾದ ಶ್ರೀ ಗಣೇಶ್ ಅವರಿಗೆ ವಹಿಸಲಾಗಿದೆ. ಗಣೇಶ್ ಅವರು ವೃತ್ತಿಯಲ್ಲಿ ನಿಪುಣ ಜಾಲತಾಣ ತಜ್ಞರಾಗಿದ್ದು ತಮ್ಮದೇ ಸಂಸ್ಥೆಯ ಮೂಲಕ ಸಾಕಷ್ಟು ಜಾಲತಾಣಗಳ ನಿರ್ವಹಣೆಯನ್ನು ಮಾಡುತ್ತ ಹೆಚ್ಚಿನ ಅನುಭವ ಹೊಂದಿದ್ದಾರೆ. ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ತನಗೆ ಅಗತ್ಯ ಇರುವ ಎಲ್ಲಾ ಮಾಹಿತಿಗಳನ್ನು ಯಾವ ಯಾವ ರೀತಿಯಲ್ಲಿ ಹಂಚಿಕೊಳ್ಳಬೇಕು ಎಂಬುದನ್ನು ಗಣೇಶ್ ಅವರಿಗೆ ತಿಳಿಸಿರುವುದರಿಂದ ಸಂಸ್ಥೆಯ ಎಲ್ಲಾ ಅಗತ್ಯಗಳು ಮತ್ತು ವ್ಯವಸ್ಥೆಗಳ ಕುರಿತು ವಿಶೇಷ ಅಧ್ಯಯನ ನಡೆಸಿರುವ ಗಣೇಶ್ ಅವರು ಸೂಕ್ತವಾದ ರೀತಿಯಲ್ಲಿ ಜನಗಳ ಕಣ್ಣಿಗೆ ಆಪ್ತವಾಗುವಂತಹ ವೈಶಿಷ್ಟ್ಯದೊಂದಿಗೆ ಕಟ್ಟಿಕೊಡುವ ಜವಾಬ್ದಾರಿಯನ್ನು ತೆಗೆದುಕೊಂಡಿರುವುದು ಅಭಿನಂದನಾರ್ಹವಾದದ್ದು.
“ತಪ್ಪೇ ಮಾಡಿದರೂ ಅದನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂಬುದು ನನ್ನ ನಿಲುವು. ಅಂತಹುದರಲ್ಲಿ ಒಳ್ಳೆಯದನ್ನು ಮಾಡುವಾಗ ನನ್ನ ಬದ್ಧತೆಯನ್ನು ಇದಕ್ಕಿಂತ ಹೆಚ್ಚಾಗಿ ಹೇಗೆ ವಿವರಿಸಲಿ? ಸಂಸ್ಥೆ ಮತ್ತು ಸಂಸ್ಥೆಯ ಆಡಳಿತ ಮಂಡಳಿ ನನ್ನ ಮೇಲೆ ಇಟ್ಟಿರುವ ನಂಬಿಕೆ ಮತ್ತು ಗೌರವಗಳಿಗೆ ತಕ್ಕಂತೆ ಮತ್ತು ಎಲ್ಲರಿಗೂ ಇಷ್ಟವಾಗುವಂತಹ ರೀತಿಯಲ್ಲಿ ಅತ್ಯುತ್ತಮವಾಗಿ ಜಾಲತಾಣವನ್ನು ರೂಪಿಸಿ, ಎಲ್ಲ ಸದಸ್ಯರು ಮತ್ತು ಸಾರ್ವಜನಿಕರಿಗೆ ತಲುಪಿಸುವ ಕೆಲಸ ಮಾಡುತ್ತೇನೆ” ಎಂದು ಎಂ ಎಲ್ ಪ್ರಸನ್ನ ಅವರು ಹೇಳಿದ್ದಾರೆ ಮತ್ತು ಈ ಜವಾಬ್ದಾರಿ ವಹಿಸಿದ ಅಧ್ಯಕ್ಷರಾದ ರವಿ ಗರಣಿ ಮತ್ತು ಕಾರ್ಯದರ್ಶಿಗಳಾದ ಸೃಜನ್ ಲೋಕೇಶ್ ಹಾಗೂ ಅವರ ತಂಡಕ್ಕೆ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಅವರ ಜೊತೆಗೆ ತಮ್ಮ ಅಭಿಪ್ರಾಯಗಳನ್ನು ಕೂಡ ದಾಖಲಿಸಿರುವ ಶ್ರೀ ಗಣೇಶ್ ಅವರು “ಇಲ್ಲಿಯವರೆಗೆ ನಾನು ರೂಪಿಸಿರುವ ಹತ್ತಾರು ಜಾಲತಾಣಗಳಿಗಿಂತ ಭಿನ್ನವಾಗಿ ಈ ಜಾಲತಾಣವನ್ನು ರೂಪಿಸಲು ಉತ್ಸುನಾಗಿದ್ದೇನೆ. ಕರ್ನಾಟಕ ಟೆಲಿವಿಷನ್ ಸಂಸ್ಥೆಯು ಸಾವಿರಾರು ಜನ ಸದಸ್ಯರ ಹಿತಾಸಕ್ತಿಗಳನ್ನು ಕಾಪಾಡುವುದಕ್ಕಾಗಿಯೇ ರೂಪಿಸಿಕೊಳ್ಳುತ್ತಿರುವ ಈ ಜಾಲತಾಣವನ್ನು ಪ್ರತಿಯೊಬ್ಬರೂ ಕೂಡ ಮೆಚ್ಚುವಂತಹ ರೀತಿಯಲ್ಲಿ ರೂಪಿಸುವ ಪ್ರಯತ್ನವನ್ನು ಮಾಡುತ್ತೇನೆ” ಎಂದು ಹೇಳಿದ್ದಾರೆ.
“ಈಗಾಗಲೇ ಜಾಲತಾಣವು ಪ್ರಥಮ ಹಂತದ ರೂಪರೇಶೆಗಳನ್ನು ಪಡೆದುಕೊಂಡಿದ್ದು ಮಾಹಿತಿಗಳನ್ನು ತುಂಬುವ ಕೆಲಸ ನಡೆಯುತ್ತಿದೆ.. ಜುಲೈ 9 ನೇ ತಾರೀಕು ಸಂಪೂರ್ಣವಾಗಿ ಸಿದ್ಧಗೊಂಡ ಜಾಲತಾಣವನ್ನು ಸಾರ್ವಜನಿಕರಿಗೆ ಅರ್ಪಿಸಲಾಗುತ್ತದೆ” ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ರವಿಗರಣಿ ಮತ್ತು ಕಾರ್ಯದರ್ಶಿಗಳಾದ ಶ್ರೀ ಸೃಜನ್ ಲೋಕೇಶ್ ಅವರು ಘೋಷಿಸಿದ್ದಾರೆ. ಅದಕ್ಕಾಗಿ ಸಾರ್ವಜನಿಕವಾಗಿ ಬೃಹತ್ ಕಾರ್ಯಕ್ರಮ ಒಂದನ್ನು ಆಯೋಜಿಸಿ ಜಾಲತಾಣವನ್ನು ಲೋಕಾರ್ಪಣೆಗೊಳಿಸಲು ಯೋಚಿಸಿರುತ್ತಾರೆ.. ಈ ಯೋಜನೆಗೆ ಬೆಂಬಲಿಸಿರುವ ಮಂಡಳಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ ಮತ್ತು ಈ ಜಾಲತಾಣದ ಉಸ್ತುವಾರಿಯ ಹೊಣೆ ಹೊತ್ತಿರುವ ಎಂಎಲ್ ಪ್ರಸನ್ನ ಮತ್ತು ಗಣೇಶ್ ಅವರಿಗೆ ಹಾರ್ದಿಕ ಅಭಿನಂದನೆ ಮತ್ತು ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ.
