ಪ್ರತಿ ನಿತ್ಯ ಶೂಟಿಂಗ್ ಮಾಡಬೇಕು, ಎಪಿಸೋಡ್ ಕಳುಹಿಸಬೇಕು…, ಏನೋ ಒಂದಷ್ಠು ಬದಲಾವಣೆ ಹೇಳಿದ್ದಾರೆ ಚಾನಲ್ನವರು, ಕೂಡಲೆ ಮಾಡಿ ಕಳುಹಿಸಬೇಕು,. . . . . . ಈ ಕಲಾವಿದರು ಬೇಡವಂತೆ. . . .,, ಆವರು ಹೇಳಿರುವ ಕಲಾವಿದರ ಡೇಟ್ಸ್ ಇಲ್ಲ !! ಪೇಮೆಂಟ್ ಹೆಚ್ಚಾಗಿ ಕೇಳ್ತಿದ್ದಾರೆ. . . . ಟ್ರಾಫಿಕ್ ಜಾಮ್ ಅಂತೆ ಲೊಕೇಷನ್ನಿಗೆ ಇನ್ನೂ ಆರ್ಟಿಸ್ಟ್ ಬಂದಿಲ್ಲ, ಪೋನ್ ಕೂಡ ರಿಸೀವ್ ಮಾಡ್ತಿಲ್ಲ. . . . . ಹೀಗೆ ಒಂದಲ್ಲ ಒಂದು ದಿನನಿತ್ಯದ ಜಂಜಾಟಗಳ ನಡುವೆ ನಮ್ಮ ದಿನ ಸಾಗುತ್ತದೆ, ಇದಕ್ಕೆ ಹೊರತಾಗಿ ಮನಸ್ಸಿಗೆ ಖುಷಿ ಕೊಡುವ ಕೆಲಸವನ್ನು ಮಾಡಬೇಕು, ಎಲ್ಲರೂ ಒಂದಾಗಿ ಸೇರಬೇಕು, ಒಂದಷ್ಠು ತರಲೆ ಮಾಡಬೇಕು ಎಂದು ಚಿಂತಿಸಿದಾಗ ಹೊಳೆದದ್ದು ಕ್ರಿಕೆಟ್ ಆಟ, ಈ ಆಟದಲ್ಲಿ, ಮಜಾ ಇದೆ, ಪೈಪೋಟಿ ಇದೆ, ಸ್ಪೋರ್ಟ್ಸ್ ಮ್ಯಾನ್ ಶಿಪ್ಪಿಗೆ ಆಸ್ಪದ ಇದೆ, ಹಾಗಾಗಿ ನಮ್ಮ ಅಸೋಸಿಯೇಷನ್ ಈ ಕ್ರಿಡೆಯನ್ನು ಆಯ್ದುಕೊಂಡು ಈಗ ಹಲವು ವರ್ಷಗಳಿಂದ ಟೊರ್ನಮೆಂಟ್ಗಳನ್ನು ಆಡಿಸುತ್ತಾ ಬಂದಿದೆ.
ಹೊಸದಾಗಿ ಚುನಾಯಿತವಾಗಿ ಬಂದ ಸಮಿತಿಯ ಉತ್ಸಾಹ ಗಗನದೆತ್ತರದಲ್ಲಿ ಇದೆ, ಹಾಗಾಗಿ ವರ್ಷದ ಆರಂಭದಲ್ಲಿ ಆಯ್ಕೆಮಾಡಿಕೊಂಡಿದ್ದು ಕ್ರೀಡೆ.
ಕಾರ್ಯದರ್ಶಿಗಳಾದ ಶ್ರೀ ಸೃಜನ್ ಲೋಕೇಶ್ ಅವರ ಸಾರಥ್ಯದಲ್ಲಿ ಒಂದು ಸಮಿತಿಯನ್ನ ರಚಿಸಿ ಪಂದ್ಯಾವಳಿಗಳ ದಿನಾಂಕವನ್ನು ಗೊತ್ತುಪಡಿಸಿ ಪ್ರಕಟಿಸಿದ್ದಾಯಿತು, ಅಂದುಕೊಂಡದ್ದಿಕ್ಕಿಂತ ಹೆಚ್ಚಿಗೆ ಪ್ರತಿಕ್ರಿಯೆ ಬಂದಾಗ ನಮ್ಮ ಕ್ರಿಕೆಟ್ ಕಮಿಟಿಯ ಉತ್ಸಾಹ ಇಮ್ಮಡಿಯಾಯಿತು.
ಒಟ್ಟು ಹದಿನಾರು ಸೀರಿಯಲ್ ತಂಡಗಳು ಮತ್ತು ನಾಲಕ್ಕು ಚಾನೆಲ್ ತಂಡಗಳು ತಮ್ಮ ಹೆಸರುಗಳನ್ನು ನೊಂದಾಯಿಕೊಂಡು ತಾಲೀಮನ್ನು ಪ್ರಾರಂಭಿಸಿಯೇ ಬಿಟ್ಟಿತು.
ನಾವು ನಡೆಸುವ ಈ ಪಂದ್ಯಾವಳಿಗಳಿಗೆ ಯಾವುದೇ ಕಾರಣಕ್ಕೂ ಅಸೋಸಿಯೇಷನ್ನಿನ ಖಾತೆಯಲ್ಲಿ ಇರುವ ಹಣವನ್ನು ವಿನಿಯೋಗಿಸುವಹಾಗಿಲ್ಲ, ಜಾಹಿರಾತಿನ ಮೂಲಕ ದೇಣಿಗೆಯನ್ನು ಎತ್ತಬೇಕು ಮತ್ತು ಆ ಹಣವನ್ನೇ ನಾವು ಖರ್ಚು ಮಾಡಬೇಕು ಎನ್ನುವುದು ಕಾರ್ಯದರ್ಶಿಗಳ ಅಣತಿ ಆಗಿತ್ತು, ಹಾಗೆಯೇ ಹಲವಾರು ಮಂದಿ ನಮಗೆ ಆಸರೆಯಾಗಿ ನಿಂತರು, ಜಾಹಿರಾತುಗಳ ಮಹಾಪೂರವೇ ಹರಿದು ಬಂದಿತು. “ದಿಗ್ವಿಜಯ ನ್ಯೂಸ್ ಮತ್ತು ವಿಜಯವಾಣಿ” ದಿನಪತ್ರಿಕೆಯವರು ನಮಗೆ ಮಾಧ್ಯಮ ಸಹಕಾರ ನೀಡಿದ್ದು ನಮ್ಮ ಪಂದ್ಯಾವಳಿಗಳ ಮೆರುಗನ್ನು ಇನ್ನಷ್ಠು ಹೆಚ್ಚಿಸಿತು.
ಪ್ರತಿ ವರ್ಷ ಅಸೋಸಿಯೇಷನ್ನಿನ ವತಿಯಿಂದ ಪಂದ್ಯಾವಳಿಗಳನ್ನು ಆಡಿಸಬೇಕು ಎಂದು ತೀರ್ಮಾನಿಸಿದಾಗ ಎದುರಾಗುತ್ತಿದುದು, ತಂಡದವರು ಟಿವಿ ಉಧ್ಯಮಕ್ಕೆ ಸೇರಿರದ ಹೊರಗಿನವರನ್ನು ಪಂದ್ಯಕ್ಕಾಗಿ ಅಸೋಸಿಯೇಷನ್ನಿಗೆ ವಾರ್ಷಿಕ ಸದಸ್ಯರನ್ನಾಗಿಸಿ ಪಂದ್ಯಗಳನ್ನು ಆಡಿಸಿ ಕ್ರೀಡಾ ಮನೋಭಾವವನ್ನು ಮರೆಯುತ್ತಾರೆ ಎನ್ನುವ ನೋವನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಈ ವರ್ಷ ಅದಕ್ಕೆ ಆಸ್ಪದ ಕೊಡದೆ ಆಡುವ ಪ್ರತಿ ತಂಡದಲ್ಲಿ ಖಡ್ಡಾಯವಾಗಿ ಇಬ್ಬರನ್ನು ಹೊರತು ಪಡಿಸಿ ಉಳಿದವರೆಲ್ಲರೂ ಆಜೀವ ಸದಸ್ಯತ್ವವನ್ನು ಪಡೆದಿರಬೇಕು ಎಂಬ ನಿಯಮವನ್ನು ಜಾರಿಗೊಳಿಸಿದ್ದರ ಫಲ ಕಳೆದ ಎರಡು ತಿಂಗಳಲ್ಲಿ ಸದಸ್ಯತ್ವದ ಸಂಖ್ಯೆ ಗಣನೀಯವಾಗಿ ಏರಿರುವುದು ನೂತನ ಕಮಿಟಿಯ ಮತ್ತೊಂದು ಸಾಧನೆ.
2023 ಮೇ 20, 21 ಮತ್ತು 27, 28 ರಂದು ಜಯನಗರದ ನ್ಯಾಷನಲ್ ಕಾಲೇಜಿನ ಆಟದ ಮೈದಾನದಲ್ಲಿ ಪಂದ್ಯಗಳನ್ನು ಆಡಿಸಲು ನಿರ್ಧರಿಸಿ ಆ ಪ್ರಕಾರ ಸಿದ್ದತೆಗಳು ನಡೆದು ಅಚ್ಚುಕಟ್ಟಾಗಿ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಪಂದ್ಯಗಳು ನಡೆದವು.
ನಾಡು ಕಂಡ ಶ್ರೇಷ್ಠ ಕಲಾವಿದರಲ್ಲಿ ಒಬ್ಬರಾದ ಹೆಸರಾಂತ ನಾಯಕ ನಟ ಶ್ರೀ ಶರಣ್ ಅವರು ಪಂದ್ಯಾವಳಿಗಳ ಉಧ್ಘಾಟನೆಯನ್ನು ಮೇ 20 ರ ಬೆಳಿಗ್ಗೆ 8.30 ಕ್ಕೆ ಬೌಲ್ ಮಾಡುವುದರ ಮೂಲಕ ನೆರವೇರಿಸಿದರು, ಅವರನ್ನು ನಾವು ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ ಬಹಳ ನಮ್ರತೆಯಿಂದ “ಇದು ನಮ್ಮ ಕುಟುಂಬ, ನಾನು ಖಂಡಿತವಾಗಿ ಬರುತ್ತೇನೆ” ಎಂದು ಆತ್ಮೀಯವಾಗಿ ಹೇಳಿ ಬಂದರು, ಅವರಿಗೆ ನಾವು ಹೃದಯ ತುಂಬಿದ ಧನ್ಯವಾದಗಳನ್ನು ಅರ್ಪಿಸುತ್ತೇವೆ.
ಅಧ್ಯಕ್ಷರಾದ ಶ್ರೀ ರವಿ ಗರಣಿ ಮತ್ತು ಕಾರ್ಯದರ್ಶಿಗಳಾದ ಶ್ರೀ ಸೃಜನ್ ಲೋಕೇಶ್ ಅವರು ಒಂದು ವಾಡಿಕೆಯನ್ನು ಬೆಳೆಸುತ್ತಿದ್ದಾರೆ. ಅದು ಏನಂದರೆ, ಪ್ರತಿ ಕಾರ್ಯಕ್ರಮದ ಜವಾಬ್ದಾರಿಯನ್ನು ಸಮಿತಿಯ ಒಬ್ಬರಿಗೆ ಕೊಡುವುದು, ಜವಾಬ್ದಾರಿಯನ್ನು ಹೊತ್ತ ವ್ಯಕ್ತಿ ಒಂದು ತಂಡವನ್ನು ಕಟ್ಟಿಕೊಂಡು ಅವರಿಗೆ ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಗದಿಪಡಿಸಿದ ಕಾರಣಕ್ಕೆ ಸಮಯಕ್ಕೆ ಸರಿಯಾಗಿ ಪಂದ್ಯಗಳು ನಡೆದವು.
