ಕರ್ನಾಟಕದ ರಾಜಕೀಯ ಅಂಗಳದಲ್ಲಿ ಈ ಹೊತ್ತಿಗೆ ಸುಮ್ಮಗೆ ಒಮ್ಮೆ ಕಣ್ಣಾಡಿಸಿ ನೋಡಿದರೆ ನಿಚ್ಚಳವಾಗಿ ಎದ್ದು ಕಾಣುವ ಸತ್ಯವೆಂದರೆ ರಾಜ್ಯ ಬಿಜೆಪಿಯ ಮುಂದಿನ ಆಶಾಕಿರಣ ಆರ್ ಅಶೋಕ !
ಅನುಮಾನವೇ ಇಲ್ಲಾ. ಆರ್ ಅಶೋಕ್ ಎಂಬುದು ಬಿಜೆಪಿಯ ಪಾಲಿಗೆ ಕೇವಲ ಹೆಸರಲ್ಲ. ಅದೊಂದು ಶಕ್ತಿ. ಯಾವುದೇ ಗಾಡ್ಫಾದರ್ಗಳಿಲ್ಲದೇ ಸ್ವಂತ ಶಕ್ತಿಯಿಂದ ಅವರು ರಾಜಕೀಯ ರಂಗದಲ್ಲಿ ಬೆಳೆದುಬಂದ ಪರಿ ಒಂದು ಬಹುದೊಡ್ಡ ಅಚ್ಚರಿ. ಕರ್ನಾಟಕದ ಅಷ್ಟೇ ಯಾಕೆ, ಇಡೀ ಭಾರತದಲ್ಲಿಯೇ ಅತ್ಯಂತ ದೊಡ್ಡ ವಿಧಾನಸಭಾ ಕ್ಷೇತ್ರವಾಗಿ ಗುರುತಿಸಿಕೊಂಡಿತ್ತು ಬೆಂಗಳೂರಿನ ಉತ್ತರಹಳ್ಳಿ ಕ್ಷೇತ್ರ. ಕಾಂಗ್ರೆಸ್ನ ಎಸ್ ರಮೇಶ್ ಅವರು ದಶಕಗಳ ಕಾಲ ಆ ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದರು. ಅವರು ಕಟ್ಟಿದ್ದ ಕಾಂಗ್ರೆಸ್ ಕೋಟೆಯನ್ನು ಒಡೆದು ಬೇರೆ ಯಾರೂ ಉತ್ತರಹಳ್ಳಿ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವೇ ಇಲ್ಲ ಎಂಬಂಥಹಾ ಸ್ಥಿತಿಯಲ್ಲಿದ್ದಾಗಲೂ ಕೇವಲ ತಮ್ಮ ಸಂಘಟನಾ ಸಾಮರ್ಥ್ಯ ಮತ್ತು ಜನಸಾಮಾನ್ಯರೊಂದಿಗೆ ಅಪಾರವಾದ ಒಡನಾಟ ಇಟ್ಟುಕೊಳ್ಳುವ ಮೂಲಕ ಅರ್ ಅಶೋಕ್ ೧೯೯೭ರಲ್ಲಿ ಪ್ರಪ್ರಥಮ ಬಾರಿಗೆ ಬೆಂಗಳೂರು ಉತ್ತರಹಳ್ಳಿ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ವಿಜಯಪತಾಕೆ ಹಾರಿಸಿದರು. ಅಲ್ಲಿಂದಾಚೆಗೆ ರಾಜಕೀಯರಂಗದಲ್ಲಿ ಅವರದು ಸದಾ ಏಳುಗಳೇ ಹೊರತು ಬೀಳುಗಳು ಇಲ್ಲವೇ ಇಲ್ಲಾ.
ಬಿಜೆಪಿ ಪಕ್ಷ ಬಿದ್ದಾಗಲೆಲ್ಲಾ ಅಥವಾ ಬೀಳುವ ಹಂತದಲ್ಲಿದ್ದಾಗಲೆಲ್ಲಾ ಅವರು ಟ್ರಬಲ್ ಶೂಟರ್ ಆಗಿ ರಂಗಕ್ಕಿಳಿಯುತ್ತಾರೆ. ತಮ್ಮ ಸಹಜ ಪ್ರೀತಿ ಮತ್ತು ಸಜ್ಜನಿಕೆಯಿಂದ ಎಲ್ಲ ಪಕ್ಷಗಳಲ್ಲೂ ಮಿತ್ರರನ್ನು ಹೊಂದಿರುವ ಆರ್ ಅಶೋಕ್ ಅವರಿಗೆ ಎಲ್ಲ ಕಡೆಯೂ ಅಪಾರ ಗೌರವವಿದೆ. ಇಷ್ಟು ವರ್ಷಗಳ ಅವರ ಸಾರ್ವಜನಿಕ ಬದುಕಿನಲ್ಲಿ ಇಲ್ಲಿಯವರೆಗೂ ತುಟಿ ಮೀರಿ ಮಾತನಾಡಿದ್ದೇ ಇಲ್ಲಾ. ಇದಕ್ಕೆ ಕಾರಣ ಅವರ ಸಂಸ್ಕಾರಭರಿತ ಜೀವನ. ಎಂಥದೇ ಸಂದರ್ಭದಲ್ಲೂ ಕೂಡಾ ಉದ್ವೇಗಕ್ಕೆ ಒಳಗಾಗದೆ ನಿರಾಳವಾಗಿ, ನಿಖರವಾಗಿ, ನಿರ್ದಿಷ್ಟವಾಗಿ ಯೋಚಿಸಬಲ್ಲ ಅವರ ಮಾನಸಿಕ ದೃಢತೆ ಇಂದಿಗೂ ರಾಜಕೀಯದಂಗಳದಲ್ಲಿ ಅನೇಕರಿಗೆ ಸೋಜಿಗ.
ಕಳೆದ ಇಪ್ಪತ್ತೈದು ವರ್ಷಗಳಿಂದ ಶಾಸಕರಾಗಿದ್ದರೂ ಸಹಾ ಎಂದಿಗೂ ಸಣ್ಣತನದ ಮಾತುಗಳಾಡಿದವರಲ್ಲ. ಆವೇಶದ ಮಾತುಗಳಿಂದ ಎದುರಾಳಿಗಳನ್ನು ಹೀಗಳೆದವರಲ್ಲ. ಯಾವುದೇ ಪ್ರಶ್ನೆಗೆ ಉತ್ತರಿಸಬೇಕಾದರೂ ಸಹಾ ಎರಡು ಕ್ಷಣ ಚಿಂತಿಸಿ ಮೆಲುನಕ್ಕು ಉತ್ತರ ನೀಡುವುದು ಅವರ ಸಹಜಗುಣ. ಕೀಳು ಅಭಿರುಚಿಯ ಮಾತುಗಳಾಡಿ ಜನರ ಬಾಯಿಗೆ ಸಿಕ್ಕವರಲ್ಲ. ಅವರ ವಿರುದ್ಧ ಹುಡುಕಿ ಹುಡುಕಿ ಹಗರಣಗಳ ಕಳಂಕ ಮೆತ್ತಲು ಪ್ರಯತ್ನಿಸಿದವರು ಸೋತು ಹೋಗಿದ್ದಾರೆ. ಯಾಕೆಂದರೆ ಅವರ ಮೇಲೆ ಯಾವುದೇ ಆರೋಪಗಳು ಬಂದಾಗಲೂ ಅವರದು ಅಚಲವಾದ ನಗುಮುಖದ ನಿರಾಕರಣೆಯ ಉತ್ತರ. ಆರೋಪಗಳು ಆಧಾರರಹಿತವಾದದ್ದು ಮತ್ತು ಕೆರಳಿಸಲು ಮಾತ್ರ ನುಡಿದಿರುವುದು ಎಂಬುದು ಗ್ರಹಿಕೆಗೆ ಬರುತ್ತಿದ್ದಂತೆಯೇ ಅವರು ನಿರಾಳವಾಗಿ ನಗುನಗುತ್ತಲೇ ಆರೋಪಗಳನ್ನು ಎದುರಿಸುತ್ತಾರೆ, ನಗುವಿನಲ್ಲೇ ಹೆದರಿಸುತ್ತಾರೆ.
೨೦೦೮ರಲ್ಲಿ ಭಾರತೀಯ ಜನತಾ ಪಕ್ಷ ಜಾತ್ಯಾತೀತ ಜನತಾದಳದ ಜೊತೆ ಮೈತ್ರಿ ಸರಕಾರ ರಚಿಸಿದಾಗ ಅಶೋಕ್ ಅವರು ಆರೋಗ್ಯ ಮತ್ತು ಕುಟುಂಬ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸಿದರು. ಆ ಸಮಯದಲ್ಲಿ ಆರೋಗ್ಯ ಇಲಾಖೆಯಲ್ಲಿ ಅಮೂಲಾಗ್ರವಾದ ಬದಲಾವಣೆಗಳನ್ನು ತರಲು ಮುಂದಾದರು. ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡುವುದು, ವ್ಯವಹಾರಗಳಲ್ಲಿ ಪಾರದರ್ಶಕತೆ, ಖಾಸಗಿ ಆಸ್ಪತ್ರೆಗಳಲ್ಲಿ ಪರಿಶೀಲನೆ, ನಕಲಿ ಡಾಕ್ಟರ್ಗಳ ಹಾವಳಿ ನಿರ್ಮೂಲನೆ ಹೀಗೆ ಅನೇಕ ಕಾರ್ಯಗಳನ್ನು ಕೈಗೊಂಡರು. ಮುಖ್ಯವಾಗಿ ಕ್ಷೇತ್ರದ ಮತ್ತು ಎಲ್ಲ ಜನರೊಂದಿಗಿನ ಅವರ ಬಾಂಧವ್ಯ ತುಂಬ ಸರಳವಾಗಿತ್ತು. ಯಾರು ಬೇಕಾದರೂ ಅವರನ್ನು ಭೇಟಿ ಮಾಡಬಹುದಿತ್ತು. ಸಮಸ್ಯೆಗಳನ್ನು ಹೇಳಿಕೊಳ್ಳಬಹುದಿತ್ತು. ಅದರ ಪರಿಹಾರಗಳಿಗೆ ಅಶೋಕ್ ಅವರ ಪ್ರಾಮಾಣಿಕ ಪ್ರಯತ್ನವೂ ಇರುತ್ತಿತ್ತು. ಒಮ್ಮೆ ಗೆಳೆಯರ ಪರಿಚಿತರೊಬ್ಬರ ಕಾರ್ ಆಕ್ಸಿಡೆಂಟ್ ಪ್ರಕರಣದಲ್ಲಿ ಅಪಘಾತಕ್ಕೆ ಒಳಗಾದವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ನೀವೇ ನೋಡಿಕೊಳ್ಳಬೇಕು ಎಂಬ ಗೆಳೆಯರ ಮನವಿಗೆ ಸ್ಪಂದಿಸಿ ತಾವು ಮಂತ್ರಿ ಎಂಬುದನ್ನೂ ಮರೆತು ಹಾಸ್ಪಿಟಲ್ನಲ್ಲಿಯೇ ಉಳಿದು ಅ ಜೀವಗಳನ್ನು ಉಳಿಸಲು ಹೋರಾಡಿದ್ದನ್ನು ಅವರು ಭಾವುಕವಾಗಿ ಆಗಾಗ ನೆನೆಯುತ್ತಾರೆ. ವೈದ್ಯಕೀಯ ಉಪಕರಣದ ಕೊರತೆಯನ್ನು ಮನಗಂಡು ಮೌಖಿಕ ಆದೇಶದ ಮೇರೆಗೆ ಅಲ್ಲಿಯೇ ಇದ್ದು ಆ ಜೀವ ಉಳಿಸುವ ಕಾರ್ಯದಲ್ಲಿ ಗೆದ್ದಾಗ ಜಗತ್ತನ್ನೇ ಗೆದ್ದಷ್ಟು ಸಂತೋಷವಾಯಿತು ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುವಾಗ ಸಾಮಾಜಿಕ ಮತ್ತು ಜನಪರ ಕಾಳಜಿಗಳಲ್ಲಿ ಅವರ ಬದ್ದತೆ ಎಷ್ಟು ಎಂಬುದು ತಿಳಿಯುತ್ತದೆ. ಹೀಗಾಗಿಯೇ ಅವರ ಕ್ಷೇತ್ರದಲ್ಲಿ ಅವರು ಇನ್ನೂ ಸೋಲಿಲ್ಲದ ಸರದಾರ. ಅದರಲ್ಲೂ ೨೦೦೪ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಎದುರಾಳಿಗಳನ್ನು ೮೦ ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದು ಕರ್ನಾಟಕ ರಾಜ್ಯದ ಚುನಾವಣೆಯಲ್ಲಿ ಇಂದಿಗೂ ಅಳಿಸಲಾಗದ ದಾಖಲೆ.
೨೦೦೮ರಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚಿಸಿದಾಗ ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸುವ ಅವಕಾಶ ಒದಗಿಬಂದಿತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಹೊಸ ಹೊಸ ತಂತ್ರಜ್ಞಾನ, ಭಾಗೀದಾರಿಕೆ ಎಲ್ಲ ನಡೆದಿದ್ದು ಈ ಸಮಯದಲ್ಲಿಯೇ. ಯಾವುದೇ ವಿಭಾಗದಲ್ಲಿ ಕೆಲಸ ಮಾಡುವಾಗಲೂ ಪರಿಣತರ ನೆರವಿನೊಂದಿಗೆ ನಿಖರವಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾ ಇದ್ದದ್ದರಿಂದಲೇ ಪಕ್ಷ ಮತ್ತು ಸರ್ಕಾರದೊಳಗೆ ಅವರು ಮುಂದಿನ ಭವಿಷ್ಯದ ನಾಯಕನಾಗಿ ಹೊಮ್ಮತೊಡಗಿದರು. ಸಾಲುಸಾಲಾಗಿ ಸಾಕಷ್ಟು ಜನ ಹಗರಣಗಳಲ್ಲಿ ಸಿಕ್ಕಿಬಿದ್ದು ಸರ್ಕಾರದ ಸ್ಥಿತಿಯೇ ಅತಂತ್ರವಾಗುವ ಪರಿಸ್ಥಿತಿ ಬಂದರೂ ಅಶೋಕ್ ಅವರ ಕೆಲಸಕಾರ್ಯಗಳಲ್ಲಿ ಎಲ್ಲಿಯೂ ಕಳಂಕದ ಕೊಳೆ ಮೆತ್ತಿಕೊಳ್ಳಲಿಲ್ಲ. ಇದ್ದರೆ ತಾನೆ ಅಂಟಿಕೊಳ್ಳುವುದು? ಇಂಥಹಾ ವರ್ಚಸ್ವೀ ವ್ಯಕ್ತಿತ್ವ ಗಳಿಸಿಕೊಂಡದ್ದಕ್ಕೆ ತಕ್ಕ ಹಾಗೆ ೨೦೧೨ರಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿ ಪಟ್ಟಕ್ಕೇರಿದಾಗ ಅದಾಗಲೇ ಮುಖ್ಯಮಂತ್ರಿ ಹುದ್ದೆಗೆ ಸೂಕ್ತ ವ್ಯಕ್ತಿ ಎಂಬಷ್ಟು ವರ್ಚಸ್ಸು ಬೆಳೆಸಿಕೊಂಡಿದ್ದರಿಂದ ಕೊನೆಗೆ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವ ಸುಯೋಗ ಒದಗಿಬಂದಿತು.
ಅಶೋಕ್ ಅವರಲ್ಲಿ ಮೆಚ್ಚಬೇಕಾದ ಅಂಶ ಇದೇ. ಅವರು ನಾಯಕರೂ ಸರಿ. ಸಿಪಾಯಿಯೂ ಸರಿ. ಮನ್ನಡೆಸು ಎಂದರೆ ನಾಯಕರಾಗುತ್ತಾರೆ. ಹಿಂಬಾಲಿಸು ಎಂದರೆ ಸಿಪಾಯಿಯಾಗುತ್ತಾರೆ. ಪಕ್ಷ ವಹಿಸಿದ ಯಾವುದೇ ಕೆಲಸವನ್ನು ಆದೇಶವನ್ನು ಮುಕ್ತಮನಸ್ಸಿನಿಂದ ಒಪ್ಪಿಕೊಂಡು ನಿಭಾಯಿಸುತ್ತಾರೆ. ಹಾಗಾಗಿಯೇ ೨೦೨೩ರ ಚುನಾವಣೆಯಲ್ಲಿ ಎರಡು ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಆದೇಶವನ್ನು ಶಿರಸಾವಹಿಸಿ ಅದರಂತೆಯೇ ನಡೆದುಕೊಂಡರು. ಸ್ವಕ್ಷೇತ್ರವೂ ಸೇರಿದಂತೆ ಡಿಕೆಶಿವಕುಮಾರ್ ವಿರುದ್ಧ ಕನಕಪುರದಲ್ಲಿ ನಿಂತು ಹೆಚ್ಚು ಕಾಲ ಅಲ್ಲಿಯೇ ಬೀಡುಬಿಟ್ಟು ಚುನಾವಣಾ ಪ್ರಚಾರ ನಡೆಸಿದರು. ಕನಕಪುರ ಕೈಹಿಡಿಯಲಿಲ್ಲವಾದರೂ ಅವರ ಸ್ವಕ್ಷೇತ್ರದ ಜನತೆ ಪದ್ಮನಾಭನಗರದಿಂದ ಅವರ ಕೈಬಿಡಲಿಲ್ಲ.
ಖಚಿತವಾಗಿ ಭಾರತೀಯ ಜನತಾಪಕ್ಷದ ಪಾಳೆಯದಿಂದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಗೌರವ ಅತಿ ಶೀಘ್ರದಲ್ಲಿಯೇ ಸ್ವೀಕರಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಭಾರತೀಯ ಜನತಾಪಕ್ಷದ ಸಾರಥ್ಯ ವಹಿಸಿ ಪಕ್ಷವನ್ನು ಮರಳಿ ಹಳಿಗೆ ತಂದು ಮುಖ್ಯಮಂತ್ರಿಯೂ ಆಗಲಿದ್ದಾರೆ ಎಂದು ಅವರ ಅಭಿಮಾನಿಗಳು ನಂಬಿದ್ದಾರೆ. ಆ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿ ಗೋಚರಿಸುತ್ತಿದೆ. ಯಾವುದಕ್ಕೂ ಆತುರ ಬೀಳದ ಮತ್ತು ಮುಖ್ಯವಾಗಿ ಅಧಿಕಾರ ಕೇಂದ್ರಿತ ರಾಜಕಾರಣವನ್ನೇ ಬಯಸದ ಸರಳ ಸಜ್ಜನ ಆರ್ ಅಶೋಕ್ ಅವರ ಸೇವಾಮನೋಭಾವಕ್ಕೆ ಎಂದಾದರೊಂದು ದಿನ ಮುಖ್ಯಮಂತ್ರಿ ಪಟ್ಟ ಒಲಿಯಲಿ ಎಂದು ನಾಡಿನ ಜನತೆ ಕೂಡಾ ಹರಸುವ ಕಾಲ ದೂರವಿಲ್ಲ.
ಅಶೋಕರ ಜೈತ್ರಯಾತ್ರೆ ಮುಂದೆ ಮುಂದೆ ಸಾಗಲಿ, ದೆಹಲಿಯನ್ನೂ ತಲುಪಲಿ !
