
ನಾವು, ನೀವು ಕಿರುತೆರೆಯ ಋಣದಲ್ಲಿರುವ ಎಲ್ಲರೂ ಮರೆಯಲೇಬಾರದ, ಮರೆಯಲೇ ಆಗದ ಹೆಸರು ಹೆಚ್ ಎಂ ಕೆ ಮೂರ್ತಿ.
ಕರ್ನಾಟಕದ ಕಿರುತೆರೆಯ ಅವಿಭಾಜ್ಯ ಅಂಗವಾಗಿದ್ದ ಅವರು ಅಂದು “ಸಿಹಿ ಕಹಿ” ಧಾರಾವಾಹಿಯನ್ನು ನಿರ್ಮಿಸಿ, ನಿರ್ದೇಶಿಸಿದ್ದರಿಂದಲೇ ಧಾರಾವಾಹಿಯ ನಿರ್ಮಾಣದತ್ತ ನಮಗೆ ಒಲವು ಮೂಡಿದ್ದು, ನಿಲುವು ರೂಪಿಸಿಕೊಂಡಿದ್ದು.
ನಿಜ, ಕನ್ನಡದ ಮೊಟ್ಟಮೊದಲ ಧಾರಾವಾಹಿಯ ಹೆಸರೇ ‘ಸಿಹಿ ಕಹಿ’. 1985ನೇ ಇಸವಿ ನವೆಂಬರ್ ಒಂದನೇ ತಾರೀಖಿನಂದು ಪ್ರಸಾರ ಆರಂಭಿಸಿದ ಸದರಿ ಧಾರಾವಾಹಿಯ ಮೂಲಕ ಬೆಳಕಿಗೆ ಬಂದು ಹೆಸರು ಮಾಡಿದ ಕಲಾವಿದರು ಅಸಂಖ್ಯ. ಆ ಪೈಕಿ ಸಿಹಿಕಹಿ ಚಂದ್ರು, ಸಿಹಿಕಹಿ ಗೀತ, ನೆ.ಲ.ನರೇಂದ್ರಬಾಬು, ಪ್ರಕಾಶ್ ರೈ, ಹೆಚ್. ವಿ. ಪ್ರಕಾಶ್, ಗೋಟೂರಿ, ಎಂ ಡಿ ಕೌಶಿಕ್, ಮಾಲತಿ ಅನಿಲ್ ಹೀಗೆ ಕಲಾವಿದರ ಹೆಸರು ಹನುಮನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಇಂಥಹ ಅಪರೂಪದ ಕಲಾವಿದರ ದಂಡನ್ನೇ ಬಣ್ಣದ ಲೋಕಕ್ಕೆ ಪರಿಚಯಿಸಿದ ಪ್ರಾತಃಸ್ಮರಣೀಯರೇ ಹೆಚ್.ಎಂ.ಕೆ.ಮೂರ್ತಿ.
‘ಸಿಹಿ ಕಹಿ’ಗೆ ಕಥೆ ಒದಗಿಸಿದವರು ಶ್ಯಾಮ್ ಪ್ರಸಾದ್ ಮೌದ್ಗಲ್. ಛಾಯಾಗ್ರಹಣ ಅಶೋಕ್ ಲಾಲ್, ಸಂಕಲನ ಪ್ರೇಂ ಚಾವ್ಲಾ, ಮೇಕಪ್ ಕೃಷ್ಣ, ಧಾರಾವಾಹಿಗೆ ಸಂಗೀತ ನಿರ್ದೇಶನ ದಾಮೋದರ್ ಮಾಡಿದರೆ, ಶೀರ್ಷಿಕೆ ಗೀತೆಯನ್ನು ಹಾಡಿದವರು ಇಂದೂ ವಿಶ್ವನಾಥ್.
ಹಲವಾರು ಬಾರಿ ದೆಹಲಿಗೆ ತೆರಳಿ, ಹಿರಿಯ ಅಧಿಕಾರಿಗಳ ಮನ ಒಲಿಸಿ ಕನ್ನಡಕ್ಕೊಂದು ಹೆಮ್ಮೆ ತಂದ ‘ಸಿಹಿಕಹಿ’ಯನ್ನು ಚಿತ್ರೀಕರಿಸಲು ಅನುಮತಿ ನೀಡಿದ್ದು ಅಂದಿನ ನಿಲಯ ನಿರ್ದೇಶಕರಾಗಿದ್ದ ಅನಿಸ್ ಉಲ್ ಹಕ್. ಹೆಚ್.ಎಂ.ಕೆ. ಮೂರ್ತಿಯವರು ನಡೆದು ಬಂದ ಹಾದಿಯ ಬಗ್ಗೆ ‘ಹೆಜ್ಜೆ ಗುರುತು’ ಎಂಬ ಪುಸ್ತಕವೊಂದು ಪ್ರಕಟಣೆಗೊಂಡಿದ್ದು ಕಿರುತೆರೆಯ ನಿರ್ಮಾಪಕ, ನಿರ್ದೇಶಕರ ಬಗೆಗಿನ ಮೊಟ್ಟಮೊದಲ ಪುಸ್ತಕ ಅದಾಗಿದೆ.
