ಸಮಾನ ಮನಸ್ಕರು ಎಂದೆನಿಸಿಕೊಂಡವರು ಒಂದೆಡೆ ಕಲೆತು, ಬೆರೆತು ಒಂದು ಸಂಘಟನೆಯನ್ನು ಕಟ್ಟಿ ಆ ಮೂಲಕ ಸದಸ್ಯರ ಕ್ಷೇಮಾಭಿವೃದ್ದಿಗೆ ಶ್ರಮಿಸುವ ಸಂಕಲ್ಪ ಮಾಡಿಕೊಂಡಿರುವವರ ನಡುವೆ ಚುನಾವಣೆ, ರಾಜಕೀಯ ಅವಶ್ಯಕತೆ ಇದೆಯೇ ಎನ್ನುವ ಪ್ರಶ್ನೆ ಬಹಳ ಸಾರಿ ಕಾಡುತ್ತದೆ. ಉತ್ತರ ಹುಡುಕುವ ಸಾಹಸಕ್ಕೆ ಕೈ ಹಾಕಿದರೆ ಗೋಜಲಾಗುತ್ತಾ ಹೋಗುತ್ತದೆ.

ಚುನಾವಣೆಗಳು ಮನಸ್ಸುಗಳನ್ನು, ಭಾವನೆಗಳನ್ನು, ಸ್ನೇಹವನ್ನು ವ್ಯಕ್ತಿತ್ವವನ್ನು ಕಸಿದುಕೊಳ್ಳುವ ಒಂದು ಯಂತ್ರ. ನನ್ನ ಮಟ್ಟಿಗೆ ಹೇಳುವುದಾದರೆ.ರಾಜ್ಯ ಅಥವ ರಾಷ್ಟ್ರ ರಾಜಕಾರಣ ಆದರೆ ಇದರ ವಿಶ್ಲೇಷಣೆಯೇ ಬೇರೆ ರೀತಿಯದ್ದಾಗಿರುತ್ತದೆ. ಆದರೆ ಸಣ್ಣ ಪುಟ್ಟ ಸಂಘಟನೆಗಳಲ್ಲಿ ಅದರಲ್ಲೂ ಸದಸ್ಯರ ಕ್ಷೇಮಾಭಿವೃದ್ದಿಗೆ ಎಂದು ತಲೆ ಎತ್ತಿ ನಿಂತಿರುವ ಸಂಸ್ಥೆಗಳಲ್ಲಿ ಚುನಾವಣೆಗಳು ನಡೆದರೆ ಅದರಿಂದಾಗುವ ಪರಿಣಾಮಗಳು ಭಾವನಾತ್ಮಕವಾಗಿ ಬಹಳ ನೋವನ್ನು ಉಂಟುಮಾಡುತ್ತವೆ.
ನಮ್ಮ ನಮ್ಮ ಅಭಿಪ್ರಾಯಗಳು ಏನೇ ಇದ್ದರೂ ಯಾವುದೇ ನೊಂದಾಯಿತ ಸಂಘವಾದರೂ ನಿಯಮದ ಪ್ರಕಾರ ಚುನಾವಣೆ ಪ್ರಕ್ರಿಯೆ ಅನಿವಾರ್ಯ. ಪ್ರತಿ ಎರಡು ಅಥವ ಮೂರು ವರ್ಷಕ್ಕೆ ಒಮ್ಮೆ ಚುನಾವಣೆ ಆಗಬೇಕು ಮತ್ತು ನೂತನ ಸಮಿತಿಯ ರಚನೆ ಆಗಿ ಅವರಿಗೆ ಸರಿ ಎನಿಸಿದಂತೆ, ಸದಸ್ಯರ ಒಳಿತಿಗಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ವಾಡಿಕೆ ಮತ್ತು ಸಂಪ್ರದಾಯ.
ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್(ರಿ) ಈ ಪ್ರಕ್ರಿಯೆಗೆ ಹೊರತಲ್ಲ, ಈ ಸಂಸ್ಥೆಯಲ್ಲಿ ಸರಿ ಸುಮಾರು ಎಂಟು ಸಾವಿರ ಮಂದಿ ಸದಸ್ಯರು ಇದ್ದು ಸಕ್ರೀಯವಾಗಿ ಇರುವವರು ಸುಮಾರು ಮೂರು ಸಾವಿರ ಮಂದಿ. ಊಟ ಕೊಡುವ ಹುಡುಗನಿಂದ ಹಿಡಿದು ನಿರ್ಮಾಪಕರವರೆವಿಗೂ ಬೇರೆ ಬೇರೆ ವಲಯಗಳಲ್ಲಿ ಸದಸ್ಯತ್ವವನ್ನು ಪಡೆದಿರುತ್ತಾರೆ. ಕಳೆದ ಮೂರು ಸಾಲು ಅಂದರೆ ಹೆಚ್ಚು ಕಡಿಮೆ ಆರು ವರ್ಷಗಳ ಕಾಲ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ನಿನ ಚುನಾವಣೆ ನಡೆದಿರಲಿಲ್ಲ, ಕೋವಿಡ್ ಮಹಾ ಮಾರಿ ಬಂದು ಜನ ಸೇರುವಂತಿಲ್ಲ ಹೀಗೆ ಒಂದಲ್ಲ ಒಂದು ಕಾರಣದಿಂದ ಚುನಾವಣೆ ಮುಂದೂಡಲ್ಪಟ್ಟು 2023 ರ ಮಾರ್ಚಿ 12 ರಂದು ಎ.ಪಿ.ಎಸ್ ಕಾಲೇಜಿನ ಆವರಣದಲ್ಲಿ ಚುನಾವಣೆ ನಡೆಯಿತು.
ಬೆಳಿಗ್ಗೆ 10ಕ್ಕೆ ಪ್ರಾರಂಭವಾಗಬೇಕಿದ್ದ ಸರ್ವ ಸದಸ್ಯರ ಸಭೆಯು ಕೋರಂ ಇಲ್ಲ ಎನ್ನುವ ಕಾರಣಕ್ಕೆ ಅರ್ಥ ಘಂಟೆಗಳ ಕಾಲ ಮುಂದೂಡಲ್ಪಟ್ಟು ಆ ನಂತರ ಪ್ರರಂಭವಾಗಿ ಒಂದಷ್ಟು ಚರ್ಚೆ, ವಾದ ವಿವಾದಗಳ ನಡುವೆಯೇ ಚುನಾವಣೆ ಪ್ರಕ್ರಿಯೆ ಮಧ್ಯಾಹ್ನ 12 ಘಂಟೆಗೆ ಆರಂಭಗೊಂಡು ಸುಸೂತ್ರವಾಗಿ ನೆರವೇರಿತು. ಸುಮಾರು 500 ಕ್ಕೂ ಹೆಚ್ಚು ಸದಸ್ಯರು ತಮ್ಮ ಹಕ್ಕನ್ನು ಚಲಾಯಿಸಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದುದು ಪ್ರಶಂಸಾರ್ಹ.
ಚುನಾವಣೆಯ ದಿನಾಂಕವನ್ನು ಗೊತ್ತುಪಡಿಸುತ್ತಿದ್ದಂತೆ ಹಲವಾರು ಸ್ನೇಹಿತರು ಉತ್ಸಾಹದಿಂದ ತಮ್ಮ ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು. ಚುನಾವಣೆ ಬೇಡ, ಇದರಿಂದ ಮನಸ್ತಾಪಗಳು ಬೆಳೆಯುತ್ತವೆ, ನಮ್ಮ ನಮ್ಮಲ್ಲಿ ವೈಮನಸ್ಯ ಹುಟ್ಟುತ್ತದೆ, ದಯಮಾಡಿ ನಾಮಪತ್ರವನ್ನು ಹಿಂದಕ್ಕೆ ಪಡೆಯಿರಿ ಎಂದು ಕೆಲವರ ಮನ ಒಲಿಸುವ ಪ್ರಯತ್ನ ಆದರೂ ಅದರಿಂದ ಪ್ರಯೋಜನ ಆಗಲಿಲ್ಲ ಎನ್ನುವುದು ಶೋಚನೀಯ. ನಿರ್ಮಾಣ ನಿರ್ವಾಹಕರ ವಲಯದಲ್ಲಿ ಇದ್ದ ಒಂದು ಸ್ಥಾನಕ್ಕೆ ಸುಮಾರು 8 ಜನ ಉಮೇದುವಾರರು ಇದ್ದುದು ಅವರಲ್ಲಿ ಇದ್ದ ಉತ್ಸಾಹದ ದ್ಯೋತಕವಾಗಿತ್ತು.
ಶ್ರೀ ರವಿ ಗರಣಿ ಅವರ ಸಾರಥ್ಯದ ತಂಡ ಚುನಾವಣೆಯಲ್ಲಿ ಬಹುಮತದಿಂದ ಗೆದ್ದು ಅಧಿಕಾರದ ಗದ್ದುಗೆಯನ್ನು ಹಿಡಿದರು. ಕಾರ್ಯದರ್ಶಿಯಾಗಿ ಶ್ರೀ ಸೃಜನ್ ಲೋಕೇಶ್, ಉಪಾಧ್ಯಕ್ಷರಾಗಿ ಶ್ರೀ ಗಣೇಶ್ ರಾವ್ ಕೇಸರ್ಕರ್ ಮತ್ತು ಪ್ರಭು ಮೇಟಿ, ಸಂಘಟನಾ ಕಾರ್ಯದರ್ಶಿಗಳಾಗಿ ಶ್ರೀಮತಿ ಸುನೇತ್ರ ಪಂಡಿತ್ ಮತ್ತು ಶ್ರೀ ಎನ್.ಟಿ ರಾಮಸ್ವಾಮಿ ಗೌಡ ಇವರುಗಳು ಸರ್ವಾನುಮತದಿಂದ ಆಯ್ಕೆಯಾಗಿ ತಮ್ಮ ತಮ್ಮ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಸಂಕಲ್ಪ ಮಾಡಿಕೊಂಡು ಕಾರ್ಯ ಪ್ರವೃತ್ತರಾಗಿದ್ದಾರೆ.
ನೂತನವಾಗಿ ಅಧಿಕಾರವನ್ನು ವಹಿಸಿಕೊಂಡ ಸಮಿತಿ ಹಲವಾರು ಕಾರ್ಯಕ್ರಮಗಳ ರೂಪುರೇಶೆಯನ್ನು ಸಿದ್ದಪಡಿಸಿ ಒಂದಾದ ಮೇಲೆ ಒಂದರಂತೆ ಎಲ್ಲವನ್ನು ಅಚ್ಚುಕಟ್ಟಾಗಿ ನಿರ್ವಹಿಸುವತ್ತ ತನ್ನ ಗಮನ ಹರಿಸಿದೆ.
ನೂತನವಾಗಿ ಆಯ್ಕೆಯಾದ ಸಮಿತಿಯ ಅಧ್ಯಕ್ಷರಾದ ಶ್ರೀ ರವಿ ಗರಣಿ ಅವರು ಚುನಾವಣೆಯ ದಿವಸವೇ ಎರಡು ವರ್ಷಗಳ ನಂತರದ ಚುನಾವಣೆಯ ದಿನಾಂಕವನ್ನು ವೇದಿಕೆಯ ಮೇಲೆ ಘೋಷಿಸಿದ್ದು ಮತ್ತೊಂದು ವಿಶೇಷ.
ವ್ಯಕ್ತಿಗಿಂತ ಸಂಸ್ಥೆ ದೊಡ್ದದು, ಚುನಾವಣೆಗಳು ಬರುತ್ತವೆ, ಹೋಗುತ್ತವೆ, ಅಭ್ಯರ್ಥಿಗಳು ಗೆಲ್ಲುತ್ತಾರೆ, ಸೋಲುತ್ತಾರೆ, ಗೆದ್ದವರು ಬೀಗದೆ, ಸೋತವರು ಕುಗ್ಗದೆ, ವೈಮನಸ್ಯಗಳನ್ನು ಬೆಳೆಸಿಕೊಳ್ಳದೆ, ಸ್ಥಿತಪ್ರಜ್ಞರಾಗಿ, ಸಂಘಟನೆಯ ಕೆಲಸಗಳಲ್ಲಿ ತೊಡಗಿಸಿಕೊಂಡು ಎಲ್ಲರೂ ಒಂದೇ, ನಮ್ಮದು ಒಂದೇ ಕುಟುಂಬ ಎಂದು ಭಾವಿಸಿ, ಭಾವನಾತ್ಮಕವಾಗಿ ಬೆಸೆದು ಬದುಕ ರೂಪಿಸಿಕೊಂಡರೆ ಬಾಳು ಸುಂದರ.
