
ಕಳೆದ ಆಗಸ್ಟ್ 15ರಂದು ಇಡೀ ದೇಶವೇ ಭಾರತದ ಸ್ವಾತಂತ್ರ್ಯ ಸಂಭ್ರಮದ ಆಚರಣೆಯಲ್ಲಿ ಮುಳುಗಿತ್ತು. ಈ ಸಂದರ್ಭದಲ್ಲಿ ಕೆಟಿವಿಎ ಸಂಸ್ಥೆಯು ಕೂಡ ವಿಧಿವತ್ತಾಗಿ ಕರ್ತವ್ಯವನ್ನು ಆಚರಿಸುತ್ತಾ ತನ್ನ ಸಂಘದ ಸದಸ್ಯರನ್ನು ಆಹ್ವಾನಿಸಿ ಧ್ವಜಾರೋಹಣ ಕಾರ್ಯಕ್ರಮವನ್ನು ಸುಸೂತ್ರವಾಗಿ ನಡೆಸಿತು.
ಬೆಳಿಗ್ಗೆ 7:00 ಸಮಯಕ್ಕೆ ಕೆಟಿವಿಎ ಆಡಳಿತ ಮಂಡಳಿಯ ಎಲ್ಲಾ ಸದಸ್ಯರಿಗೂ ಹಾಜರಿರುವಂತೆ ಸೂಚನೆ ನೀಡಲಾಗಿತ್ತು. ಕೆಟಿವಿಎನ ಎಲ್ಲ ಸದಸ್ಯರಿಗೂ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಕ್ತ ಆಹ್ವಾನ ನೀಡಲಾಗಿತ್ತು ಕತ್ರಿಗುಪ್ಪೆಯಲ್ಲಿ ಕಚೇರಿಯಿಂದ ಸ್ವಲ್ಪವೇ ಮುಂದೆ ಚಿಕ್ಕ ವೃತ್ತದ ಪಕ್ಕದ ಪಾರ್ಕ್ನ ಬಳಿ ಇರುವ ಧ್ವಜಾರೋಹಣ ಸ್ತಂಭವನ್ನು ಕೆಟಿವಿಎ ವತಿಯಿಂದ ಧ್ವಜಾರೋಹಣ ಮಾಡಲು ಆಯ್ಕೆ ಮಾಡಲಾಗಿತ್ತು.
ನಿರೀಕ್ಷಿಸಿದ್ದಂತೆಯೇ ತಂಡದ ಆಡಳಿತ ಮಂಡಳಿಯ ಬಹುತೇಕರು ಅಲ್ಲಿ ಹಾಜರಿದ್ದರು. ಕೆಟಿವಿಎ ಆಡಳಿತ ಮಂಡಳಿಯ ಹಿರಿಯ ಸದಸ್ಯರಾದ ಶ್ರೀಮತಿ ಗಿರಿಜಾ ಲೋಕೇಶ್ರವರು ಎಲ್ಲರಿಗಿಂತ ಮುಂಚೆಯೇ ಆಗಮಿಸಿ ಉತ್ಸಾಹದಿಂದ ಧ್ವಜಾರೋಹಣ ಕಾರ್ಯಕ್ರಮಕ್ಕೆ ಎಲ್ಲರನ್ನೂ ಹುರಿದುಂಬಿಸುತ್ತಿದ್ದರು. ಏಳು ಗಂಟೆ ಮೂವತ್ತು ನಿಮಿಷಗಳಿಗೆ ಸಕಲ ಸಿದ್ಧತೆಗಳನ್ನು ಪೂರೈಸಲಾಯಿತು. ಹೆಂಗಳೆಯರು ರಂಗೋಲಿ ಇಟ್ಟು ಹೂವುಗಳಿಂದ ಧ್ವಜಸ್ತಂಭವನ್ನು ಸಿಂಗರಿಸಿದ್ದರು. ಧ್ವಜಸ್ತಂಭದ ಮುಂದೆ ಮಹಾತ್ಮ ಗಾಂಧಿಯವರ ಭಾವಚಿತ್ರವನ್ನು ಇರಿಸಿ ಹೂವು ಹಣ್ಣು ಇತ್ಯಾದಿಗಳೊಂದಿಗೆ ವಿಧ್ಯುಕ್ತವಾಗಿ ಪೂಜೆ ಆರತಿಗಳನ್ನು ಮಾಡಲಾಯಿತು. ಆನಂತರ ಶ್ರೀಮತಿ ಗಿರಿಜಾ ಲೋಕೇಶ್ ಅವರ ನೇತೃತ್ವದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಭಕ್ತಿ ಶ್ರದ್ಧೆಯಿಂದ ರಾಷ್ಟ್ರಗೀತೆಯನ್ನು ಹಾಡಿ ನಮಿಸಲಾಯಿತು. ಈ ಸಂದರ್ಭದಲ್ಲಿ ನೆರೆದಿದ್ದವರೆಲ್ಲರಿಗೂ ಕೂಡ ಸಿಹಿ ಹಂಚಲಾಯಿತು. ಬಹುತೇಕ ಎಲ್ಲರೂ ಬಿಳಿಯ ಬಟ್ಟೆಗಳನ್ನು ಧರಿಸಿ ಬಂದದ್ದು ವಿಶೇಷವಾಗಿತ್ತು. ಅದರಲ್ಲಿಯೂ ಕೆಲವರು ರಾಷ್ಟ್ರಧ್ವಜದ ಬಣ್ಣವಿರುವ ದಿರಿಸು ಸೀರೆ ಉಟ್ಟು ಬಂದಿದ್ದು ಮತ್ತೂ ವಿಶೇಷವಾಗಿತ್ತು. ಬಂದವರೆಲ್ಲರಿಗೂ ರಾಷ್ಟ್ರಚಿಹ್ನೆಯ ಬ್ಯಾಡ್ಜ್ ಅನ್ನು ತೊಟ್ಟ ದಿರಿಸಿಗೆ ಸಿಕ್ಕಿಸಲಾಗಿತ್ತು. ಮತ್ತೂ ಕೆಲವರಿಗೆ ರಾಷ್ಟ್ರಧ್ವಜದ ಮಾದರಿಯಂತಹ ಪುಟ್ಟ ಶಾಲನ್ನು ಕತ್ತಿಗೆ ಹೊದಿಸಿ ಸ್ವಾಗತಿಸಲಾಗಿತ್ತು.
ಧ್ವಜಾರೋಹಣದ ನಂತರ ಸಂಸ್ಥೆಯ ಮುಖ್ಯಸ್ಥರು ಪುಟ್ಟ ಪುಟ್ಟ ಭಾಷಣಗಳನ್ನು ಮಾಡಿ ಈ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟ ಸಂಘದ ಎಲ್ಲ ಸದಸ್ಯರಿಗೆ ಗೌರವ ಸಲ್ಲಿಸಿದರು. ಸಿಹಿ ಸ್ವೀಕರಿಸಿದ ನಂತರ ಎಲ್ಲ ಸದಸ್ಯರು ಸಂತಸದಿಂದಲೇ ಫೋಟೋ ತೆಗೆಸಿಕೊಳ್ಳುವ ಖುಷಿಯನ್ನು ಮುಗಿಸಿಕೊಂಡು ಒಟ್ಟಾಗಿ ಸಮೀಪದಲ್ಲಿದ್ದ ಹೋಟೆಲಿಗೆ ತೆರಳಿ ಉಪಹಾರ ಸ್ವೀಕರಿಸಿ ಪರಸ್ಪರ ಬೀಳ್ಕೊಂಡರು.
ಭಾರತದ ಸ್ವಾತಂತ್ರ್ಯ ಮಹೋತ್ಸವದ ಪ್ರಯುಕ್ತವಾಗಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ತೃಪ್ತಿ ಎಲ್ಲರಲ್ಲೂ ಧನ್ಯತಾ ಭಾವವನ್ನು ಕೂಡ ಮೂಡಿಸಿತು. ಜೈಹಿಂದ್ !



