ಮೇಜರ್ ಸಂದೀಪ್ ಉನ್ನಿಕೃ಼ಷ್ಣನ್ !
ಆ ಹೆಸರು ಕೇಳಿದರೆ ಸಾಕು ಈಗಲೂ ಭಾರತೀಯರ ಅದರಲ್ಲೂ ಕನ್ನಡಿಗರಲ್ಲಿ ದೇಶಾಭಿಮಾನದ ಮಿಂಚು ಹರಿದಂತಾಗುತ್ತದೆ. ಅರಿವೆಯೇ ಆಗದಂತೆ ಹೃದಯ ಒದ್ದೆಯಾಗಿ ಕಣ್ಣು ಭಾರವಾಗಿ ಭಾವುಕ ಅಶ್ರುತರ್ಪಣ ಸಲ್ಲಿಸುತ್ತದೆ. ಆತನ ಬಲಿದಾನಕ್ಕೆ ಈಗ ಹೆಚ್ಚುಕಮ್ಮಿ ೧೫ ವರ್ಷವೇ ಆಗುತ್ತಿದೆ. ಭಾರತ ಮಾತೆಯ ಹೆಮ್ಮೆಯ ಪುತ್ರ ಈ ದೇಶಭಕ್ತ ಯೋಧ.
ಇದೇ ಆಗಸ್ಟ್ ೧೫ಕ್ಕೆ ಭಾರತ ತನ್ನ ೭೭ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಿದೆ. ಲಕ್ಷಾಂತರ ದೇಶಭಕ್ತರು ಸಲ್ಲಿಸಿದ ಬಲಿದಾನದ ಫಲವಾಗಿ ನಾವಿಂದು ಸ್ವಾತಂತ್ರ್ಯವನ್ನು ಗಳಿಸಿ ಪ್ರಜಾಪ್ರಭುತ್ವದ ನೆರಳಿನಲ್ಲಿ ನೆಮ್ಮದಿಯಾಗಿದ್ದೇವೆ. ಸ್ವಾತಂತ್ರ್ಯ ಪಡೆದ ನಂತರವೂ ಕೂಡ ದೇಶದ ಮೇಲೆ ಶತ್ರು ರಾಷ್ಟ್ರಗಳು ದಾಳಿ ಮಾಡುತ್ತಲೇ ಇವೆ. ಕೆಲವೊಮ್ಮೆ ನೇರವಾಗಿ, ಕೆಲವೊಮ್ಮೆ ಪರೋಕ್ಷವಾಗಿ. ದೊಡ್ಡ ಪಿತೂರಿ ಮತ್ತು ಸಂಚಿನೊಂದಿಗೆ ೧೫ ವರ್ಷಗಳ ಹಿಂದೆ ಪಾಪಿ ಪಾಕಿಸ್ತಾನ ಇಂತಹ ಒಂದು ಪರೋಕ್ಷ ಯುದ್ಧವನ್ನು ಸಾರಿತು. ಪಾಕಿಸ್ತಾನದಿಂದ ಜಲಮಾರ್ಗದಲ್ಲಿ ಮುಂಬೈ ಪ್ರವೇಶಿಸಿದ ೧೦ ಉಗ್ರಗಾಮಿಗಳು, ಗುಂಪು ಗುಂಪುಗಳಾಗಿ ವಿಭಜಿಸಿಕೊಂಡು ಮುಂಬೈಯಲ್ಲಿನ ಪ್ರಮುಖ ಸ್ಥಳಗಳಲ್ಲಿ ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ಮಾಡಿ ಎದುರು ಸಿಕ್ಕ ನಾಗರೀಕರನ್ನು ಮನಬಂದಂತೆ ಹತ್ಯೆ ಮಾಡಿ ಇಡೀ ದೇಶವೇ ಬೆಚ್ಚಿ ಕೂರುವಂತೆ ಮಾಡಿದರು.
ಆ ಸಮಯದಲ್ಲಿ ಮುಂಬೈನ ತಾಜ್ ಹೋಟೆಲ್ನಲ್ಲಿ ಭಯೋತ್ಪಾದಕರ ಹಿಡಿತಕ್ಕೆ ಸಿಲುಕಿ ಜೀವಭಯದಿಂದ ನರಳುತ್ತಿದ್ದ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಲು ೫೧ ಸ್ಪೆಷಲ್ ಆಕ್ಷನ್ ಗ್ರೂಪ್ ಬಂದು ಇಳಿಯಿತು. ಹತ್ತು ಜನ ಕಮಾಂಡೋಗಳಿದ್ದ ಆ ತಂಡದ ನೇತೃತ್ವ ವಹಿಸಿದ್ದವರೇ ಮೇಜರ್ ಉನ್ನಿಕೃಷ್ಣನ್. ಆಪರೇಷನ್ ಬ್ಲಾಕ್ ಟಾರ್ನೆಡೋ ಎಂದು ಹೆಸರಾದ ಈ ಕಾರ್ಯಾಚರಣೆಯಲ್ಲಿ ಜೀವದ ಹಂಗು ತೊರೆದು ಹೋರಾಡಿದರು. ಭಯೋತ್ಪಾದಕರು ಮತ್ತು ಒತ್ತೆಯಾಳಗಳ ನಡುವೆ ಕಂದರ ಏರ್ಪಡುವ ಹಾಗೆ ಮಾಡಿ ಒತ್ತೆಯಾಳುಗಳಿಂದ ಭಯೋತ್ಪಾದಕರು ಬೇರಾಗುವ ಹಾಗೆ ಮಾಡಿ ಆ ನಾಲ್ಕು ಜನ ಭಯೋತ್ಪಾದಕರು ಯೋಧರ ಗುಂಡುಗಳಿಗೆ ಸಿಲುಕಿ ಸಾವನ್ನಪ್ಪುವ ಹಾಗೆ ಮಾಡಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಆ ಪ್ರಯತ್ನದಲ್ಲಿ ತಮ್ಮ ಜೀವವನ್ನೇ ಬಲಿ ಕೊಡಬೇಕಾಯಿತು. ಸಂಗಾತಿಗಳನ್ನು ಅಪಾಯಕ್ಕೆ ಈಡು ಮಾಡದೆ ಕೆಚ್ಚೆದೆಯಿಂದ ರಕ್ಷಿಸಿಕೊಳ್ಳುತ್ತಾ ಒಬ್ಬರೇ ಹೋರಾಡಿದ್ದು ಮತ್ತು ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಕಾಪಾಡಲು ಬದ್ಧರಾಗಿದ್ದ ಅವರ ಶೌರ್ಯವನ್ನು ಗುರುತಿಸಿ ಮರಣಾನಂತರ ಅವರಿಗೆ ಅಶೋಕಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಚಿಕ್ಕಂದಿನಿಂದಲೂ ಸೈನ್ಯ ಸೇರುವ ಮೂಲಕ ದೇಶಸೇವೆ ಸಲ್ಲಿಸುವ ಕನಸು ಹೊತ್ತಿದ್ದ ಸಂದೀಪ್ ಉನ್ನಿಕೃಷ್ಣನ್ಗೆ ಇಸ್ರೋದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದ ತಂದೆ ಕೆ.ಉನ್ನಿಕೃಷ್ಣನ್ ಯಾವತ್ತಿಗೂ ಬೇಡ ಅಂದವರಲ್ಲ. ಇದ್ದ ಒಬ್ಬನೇ ಮಗನನ್ನೂ ಕೂಡಾ ಸೈನ್ಯಕ್ಕೆ ಕಳುಹಿಸಿಕೊಟ್ಟ ದೇಶಭಕ್ತ ಕುಟುಂಬ ಅದು. ಕೇರಳದಿಂದ ವಲಸೆ ಬಂದು ಇಲ್ಲಿಯೇ ನೆಲೆಸಿ ದೇಶಕ್ಕೆ ಬಲಿದಾನ ನೀಡಿ ಕನ್ನಡದ ಮಣ್ಣಿನಲ್ಲಿ ಮಣ್ಣಾಗಿ ಬೆರೆತ ಸಂದೀಪ್ ಉನ್ನಿಕೃಷ್ಣನ್ ಕರ್ನಾಟಕದ ಹೆಮ್ಮೆ. ಹಾಗಾಗಿ ಯಲಹಂಕದ ಡೈರಿ ಸರ್ಕಲ್ ದಾಟಿದ ನಂತರ ದೊಡ್ಡಬಳ್ಳಾಪುರ ರಸ್ತೆಯ ಎಂಎಸ್ ಪಾಳ್ಯ ಜಂಕ್ಷನ್ ವರೆಗೂ ಇರುವ ನಾಲ್ಕೂವರೆ ಕಿಲೋಮೀಟರ್ ಉದ್ದದ ರಸ್ತೆಗೆ ಸಂದೀಪ್ ಉನ್ನಿಕೃಷ್ಣನ್ ಅವರ ಹೆಸರನ್ನು ಇಟ್ಟು ಗೌರವಿಸಲಾಗಿದೆ. ಸಂದೀಪ್ ಉನ್ನಿಕೃಷ್ಣನ್ ಸ್ಪೂರ್ತಿಯಲ್ಲಿ, ಅವರದೇ ಹೆಸರಿನಲ್ಲಿ ತೆಲುಗಿನ ಖ್ಯಾತ ಚಿತ್ರನಟ ಮಹೇಶ್ ಬಾಬು ಅವರು ಮೇಜರ್ ಎಂಬ ಚಿತ್ರ ನಿರ್ಮಿಸಿದ್ದಾರೆ. ಭಾರತದಾದ್ಯಂತ ಕೋವಿಡ್ ಸಮಯದಲ್ಲಿ ಬಿಡುಗಡೆಯಾದ ಚಿತ್ರವಾದರೂ ಕೂಡ ಆ ಚಿತ್ರ ನೂರಾರು ಕೋಟಿ ಗಳಿಸಿ ಉನ್ನಿಕೃಷ್ಣನ್ ಅವರಿಗೆ ಗೌರವ ಸಲ್ಲಿಸಿತು. ಭಾರತದ ಅನೇಕ ಕಡೆ ಅವರ ಹೆಸರಿನಲ್ಲಿ ಸ್ಮಾರಕಗಳು ನಿರ್ಮಾಣವಾಗಿದೆ.
ಭಾರತವು ಇದೇ ಆಗಸ್ಟ್ ೧೫ರಂದು ತನ್ನ ೭೭ನೇ ಸ್ವಾತಂತ್ರ್ಯ ದಿನೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಭಾರತಮಾತೆಯ ಹೆಮ್ಮೆಯ ಪುತ್ರ ವೀರಯೋಧ ಸಂದೀಪ್ ಉನ್ನಿಕೃಷ್ಣನ್ ಅವರನ್ನು ಹೃತ್ಪೂರ್ವಕವಾಗಿ ಸ್ಮರಿಸುವುದರ ಮೂಲಕ ಟಿವಿ-ಠೀವಿ ಪತ್ರಿಕೆ ಗೌರವಿಸುತ್ತಿದೆ. ಜೈ ಹಿಂದ್ ಜೈ ಜವಾನ್.
